ಮೈಸೂರು: ಇನ್ನು ಮುಂದೆ ಗಾಂಧಿ ಚೌಕದಲ್ಲಿ ಮಾತ್ರ ಪ್ರತಿಭಟನೆ
ಇದೇ ವೇಳೆ, ಅಲ್ಬರ್ಟ್ ವಿಕ್ಟರ್ ಮತ್ತು ಡಿ. ದೇವರಾಜ ಅರಸು ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವಂತಿಲ್ಲ ಎಂದೂ ಅವರು ಆಜ್ಞಾಪಿಸಿದ್ದಾರೆ. ಇದರಿಂದ ನಗರದ ಹೃದಯ ಭಾಗದಲ್ಲಿರುವ ವ್ಯಾಪಾರಿಗಳು ಸಾಕಷ್ಟು ನಿರಾಳಗೊಂಡಿದ್ದಾರೆ.
ಜನಸಂಖ್ಯೆ, ವಾಹನ ಓಡಾಟ ಹೆಚ್ಚಾಗತೊಡಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆಗಳು ಸಾಮಾನ್ಯವಾದಾಗ ಇಲ್ಲಿನ ವ್ಯಾಪಾರಿಗಳು ಭಾರಿ ತೊಂದರೆ ಅನುಭವಿಸುತ್ತಿದ್ದರು. ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿದರಂತೂ ವ್ಯಾಪಾರಿಗಳ ಗೋಳು ಮುಗಿಲುಮುಟ್ಟುತ್ತಿತ್ತು. ಸಾಮಾನ್ಯ ಜನಜೀವನವೂ ಅಸ್ತವ್ಯಸ್ತವಾಗುತ್ತಿತ್ತು. ಈಗ ಎಲ್ಲದಕ್ಕೂ ಮುಕ್ತಿ ದೊರಕಿದೆ.
ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್ಕುಮಾರ್ ಅವರನ್ನು 108 ದಿನಗಳ ಕಾಲ ಅಪಹರಿಸಿದಾಗ ನಗರದಲ್ಲಿ ಪ್ರತಿಭಟನಾ ಮೆರವಣಿಗೆಗಳು ನಿರಂತರವಾಗಿ ನಡೆದವು. ಆಗಲೇ ಅಂದರೆ 2002ರ ಜುಲೈನಲ್ಲಿ ಪ್ರತಿಭಟನಾ ಮಾರ್ಗಗಳನ್ನು ಬದಲಿಸುವ ಕೂಗು ಕೇಳಿಬಂದಿತ್ತು. ಅಂದಿನ ಉಪಾಯುಕ್ತ ಪಿ. ಮಾಧವನನ್ ಅವರು ಪ್ರತಿಭಟನೆಗಳಿಗೆ ಗಾಂಧಿ ಚೌಕ ಪ್ರಶಸ್ತ ಎಂಬುದನ್ನು ಗುರುತಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಹರ್ಷ ಗುಪ್ತಾ ಮತ್ತು ಮಹಾನಗರ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ಈ ಕೂಗಿಗೆ ಮತ್ತೆ ಕಿವಿಗೊಟ್ಟರು. ಕೆ.ಆರ್. ವೃತ್ತ ಮತ್ತು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಯಿತು.