ಎಲ್ಪಿಜಿ ಮಾಹಿತಿ ಒದಗಿಸಲು ಫೆ.28ರವರೆಗೆ ಅವಕಾಶ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ 70,66,753 ಸಂಖ್ಯೆ ಎಲ್ಪಿಜಿ ಕನೆಕ್ಷನ್ ಇದ್ದು, ಇದುವರೆಗೆ 38,30,391 ಕನೆಕ್ಷನ್ ಬಗ್ಗೆ ಮಾತ್ರ ಮಾಹಿತಿ ದೊರೆತಿದೆ. ಮಾಹಿತಿ ಸಲ್ಲಿಸದೇ ಇರುವ ಪಡಿತರ ಚೀಟಿಗಳ ಮತ್ತು ಗ್ಯಾಸ್ ಕನೆಕ್ಷನ್ಗಳ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ ನಲ್ಲಿ ಮತ್ತು ನ್ಯಾಯಬೆಲೆ ಹಾಗೂ ಗ್ಯಾಸ್ ವಿತರಕರಗಳ ಅಂಗಡಿಗಳಲ್ಲಿ ಪ್ರದರ್ಶಿಸಲಾಗುವುದು. ಮಾಹಿತಿಯನ್ನು ಒದಗಿಸಿ ಇಲಾಖಾ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದರೆ ಮಾತ್ರ ಪಡಿತರ ಚೀಟಿ ಮತ್ತು ಗ್ಯಾಸ್ ಕನೆಕ್ಷನ್ಗಳ ಸೇವೆಯನ್ನು ಮತ್ತೆ ಒದಗಿಸಲಾಗುವುದೆಂದು ಅವರು ತಿಳಿಸಿದರು.
ರಾಜ್ಯದಲ್ಲಿರುವ ಕುಟುಂಬಗಳ ಸಂಖ್ಯೆ ಸುಮಾರು 1.20 ಕೋಟಿ ಆಗಿದ್ದರೆ, ಪಡಿತರ ಚೀಟಿಗಳ ಸಂಖ್ಯೆ ಸುಮಾರು 1.60 ಕೋಟಿಯಾಗಿರುತ್ತದೆ. ಅವುಗಳ ಪೈಕಿ ಸುಮಾರು 98.05 ಲಕ್ಷ ಚೀಟಿಗಳು ಬಡತನ ರೇಖೆಗಿಂತ ಕೆಳಗಿನವು, ಸುಮಾರು 60 ಲಕ್ಷ ಬಡತನ ರೇಖೆಗಿಂತ ಮೇಲಿನವು ಆಗಿರುತ್ತದೆ. ಕೇಂದ್ರ ಸರ್ಕಾರವು ಸುಮಾರು 32 ಲಕ್ಷ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ. ಉಳಿದ ಬಿಪಿಎಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಆಹಾರ ಧಾನ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲು ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 100 ಕೋಟಿ ರೂ.ಗಳವರೆಗೆ ಹೆಚ್ಚಿನ ಖರ್ಚು ತಗಲುತ್ತಿದೆ. ಅನಧಿಕೃತ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಿ ಎಲ್ಲ ಬಡಜನರಿಗೆ ಸರ್ಕಾರ ನೀಡುತ್ತಿರುವ ಹಲವು ಸವಲತ್ತುಗಳು ದೊರೆಯುವಂತಾಗಬೇಕೆಂಬುದೇ ಮಾಹಿತಿ ಸಂಗ್ರಹಣೆಯ ಉದ್ದೇಶವಾಗಿದೆ ಎಂದರು.
ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಪಡಿತರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ಸಾಗಾಣಿಕೆ ಏಜೆನ್ಸಿಗಳ ಮೂಲಕ ವಿತರಿಸುವ ಸಂದರ್ಭದಲ್ಲಿ ಅವ್ಯವಹಾರಗಳು ಆಗುತ್ತಿದ್ದು ಇದನ್ನು ತಡೆಗಟ್ಟಲು ನ್ಯಾಯಬೆಲೆ ಅಂಗಡಿಗಳೇ ಪಡಿತರ ವಸ್ತುಗಳನ್ನು ರಾಜ್ಯ ಸರ್ಕಾರದ ಗೋದಾಮುಗಳಿಂದ ಕೊಂಡೊಯ್ಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು, ನ್ಯಾಯಬೆಲೆ ಅಂಗಡಿಯವರು ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅವರು ತಿಳಿಸಿದರು.