ನನ್ನನ್ನೂ ಜೆಪಿಸಿಗೆ ಒಪ್ಪಿಸಿ: ಕಲ್ಮಾಡಿ ಹೊಸ ವರಾತ
2ಜಿ ಸ್ಪೆಕ್ಟ್ರಂ ಹಗರಣ, ಇಸ್ರೊದ ಎಸ್-ಬ್ಯಾಂಡ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಹೀಗೆ ಒಂದೊಂದೇ ಹಗರಣವನ್ನು ತಡವಾಗಿಯಾದರೂ ಜೆಪಿಸಿ ತನಿಖೆಗೆ ಒಪ್ಪಿಸುವುದಕ್ಕೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸಜ್ಜಾಗುತ್ತಿರುವಾಗ, ನನ್ನನ್ನೂ ಜೆಪಿಸಿ ತನಿಖೆಗೆ ಒಳಪಡಿಸಿ ಎಂದು ಸಿಡಬ್ಲ್ಯುಜಿ ಕರ್ಮಕಾಂಡದ ಪಿತಾಮಹ ಎಂದೇ ಬಿಂಬಿತವಾಗಿರುವ, ಮೂಲತಃ ಕರ್ನಾಟಕದವರೇ ಆದ ಕಲ್ಮಾಡಿ ಗುಟುರುಹಾಕಿದ್ದಾರೆ.
ಹಗರಣದ ಅಷ್ಟೂ ಮುಖಗಳನ್ನು ಜೆಪಿಸಿ ಸಾರ್ವಜನಿಕಗೊಳಿಸಲಿ ಎಂಬುದು ನನ್ನ ಆಶಯ. ನಾನು ಒಂದೇ ಒಂದು ನಯಾಪೈಸೆಯನ್ನೂ ಮುಟ್ಟಿಲ್ಲ. ಭ್ರಷ್ಟಾಚಾರದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂಬುದು ಸಾಬೀತಾದರೆ ನನ್ನ ಸಂಸದ್ ಸದಸ್ಯತ್ವಕ್ಕೆ (ಪುಣೆ) ರಾಜೀನಾಮೆ ನೀಡುವುದಾಗಿ ಕಲ್ಮಾಡಿ ಘೋಷಿಸಿದ್ದಾರೆ.
'ಅಕ್ಷರಶಃ ನನ್ನೊಬ್ಬನನ್ನೇ ಬಲಿಪಶು ಮಾಡಲಾಗುತ್ತಿದೆ. ಸಿಡಬ್ಲ್ಯುಜಿಗೆ ನಾನೊಬ್ಬನೇ ಯಜಮಾನನಲ್ಲ. ದಿಲ್ಲಿ ಸರಕಾರ, ಸ್ವತಃ ಕೇಂದ್ರ ಸರಕಾರದ ಅನೇಕ ಇಲಾಖೆಗಳು ಇದರ ಹೊಣೆಹೊತ್ತಿದ್ದವು. ಅಂತಹುದರಲ್ಲಿ ನನ್ನನ್ನೇ ಏಕೆ ಗುರಿಮಾಡಲಾಗಿದೆ?' ಎಂದು ಕಲ್ಮಾಡಿ ಅಮಾಯಕವಾಗಿ ಪ್ರಶ್ನಿಸಿದ್ದಾರೆ.