ಕೋಮುವಾದದ ಅಂಗಿ ಕಳಚಿದ ಬಜರಂಗಿ ಮಹೇಂದ್ರ
ಕ್ರೈಸ್ತರಿಂದ ಬಲವಂತದ ಮತಾಂತರವನ್ನು ವಿರೋಧಿಸಿ ರಾಜ್ಯಾದ್ಯಂತ ಚರ್ಚ್ ದಾಳಿ ನಡೆಸಿದ ಆರೋಪ ಹೊತ್ತಿರುವ ಬಜರಂಗ ದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರು ಜೆಡಿಎಸ್ ಸೇರ್ಪಡೆಯಾದ ಸಂದರ್ಭದಲ್ಲಿ ಜೆಡಿಎಸ್ ಕಚೇರಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಿರ ದನ ಪೂರೈಸಿದ ಸಂಭ್ರಮ ಆಚರಿಸುತ್ತಿರುವ ಬಿಜೆಪಿಯದು ಸಾವಿರ ಸುಳ್ಳಿನ ಸಮಾವೇಶ, ಮೈಸೂರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಸಮಾವೇಶ ಗೊತ್ತು ಗುರಿ ಇಲ್ಲದ ಸಮಾವೇಶ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಹೊಸ ಅಂಗಿ ತೊಟ್ಟ ಮಹೇಂದ್ರ : ಕುಮಾರಸ್ವಾಮಿ ಮತ್ತು ವೈ ಎಸ್ ವಿ ದತ್ತಾ ಅವರ ಸಮ್ಮುಖದಲ್ಲಿ ತೆನೆಹೊತ್ತ ಮಹಿಳೆಯ ಪಕ್ಷಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಯಾದ ಮಹೇಂದ್ರ ಕುಮಾರ್ ಅವರು, ಇಂದು ದಾರಿ ತಪ್ಪುತ್ತಿರುವ ಯುವಕರನ್ನು ಕೋಮುವಾದದಿಂದ ಹೊರತರುವ ಯತ್ನಕ್ಕೆ ಕೈಹಾಕುತ್ತಿದ್ದೇನೆ ಎಂದು ಘೋಷಿಸಿದರು.
ನಾಡಿನಾದ್ಯಂತ ನಡೆದಿರುವ ಚರ್ಚ್ ದಾಳಿಯ ನೇತೃತ್ವ ವಹಿಸಿ, ಬಂಧನಕ್ಕೂ ಒಳಗಾಗಿದ್ದ ಮಹೇಂದ್ರ ಕುಮಾರ್ ಅವರು, ಬಜರಂಗ ದಳದೊಂದಿಗಿನ ಎಲ್ಲ ಸಂಪರ್ಕ ಕಳೆದುಕೊಂಡಿದ್ದೇನೆ. ಇನ್ನು ಮುಂದೆ ಕೋಮುವಾದದ ವಿರುದ್ಧವೇ ಹೋರಾಟ ನಡೆಸುತ್ತೇನೆ. ನನ್ನ ಈ ಅಭಿಯಾನದ ಹಿಂದೆ ಜನತಾ ಪರಿವಾರ ನನ್ನ ಹಿಂದಿರಲಿದೆ ಎಂದು ಮಹೇಂದ್ರ ಹೇಳಿದರು.
ಇದೇ ಮಹೇಂದ್ರ ಕುಮಾರ್ ಅವರು ಚರ್ಚ್ ಮೇಲಾದ ದಾಳಿಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ಕ್ರಮವೇಕೆ ಕೈಗೊಳ್ಳಬಾರದು ಎಂದು ಕ್ರೈಸ್ತ ಸಮುದಾಯ ಕೇಳಿದ್ದ ಪ್ರಶ್ನೆಯನ್ನು ನ್ಯಾ. ಸೋಮಶೇಖರ ಆಯೋಗ ಸಮರ್ಥಿಸಿಕೊಂಡಿತ್ತು. ಈಗ ಮಹೇಂದ್ರ ಕುಮಾರ್ ಅವರೇ ಕೋಮುವಾದದ ಅಂಗಿಯನ್ನು ಕಳಚಿಕೊಂಡು ಹೊಸ ಬಟ್ಟೆ ತೊಟ್ಟಿದ್ದಾರೆ. ಇದೆಲ್ಲ ರಾಜಕೀಯದಲ್ಲಿ ಸಮಾನ್ಯ ಅಲ್ಲವೆ?