ಗಡಿ ಗಣಿ ಮಾಲೀಕರಿಗೆ ತಪ್ಪದ ಸಿಬಿಐ ಕಾಟ
ಓಬಳಾಪುರಂ ವ್ಯಾಪ್ತಿಯಲ್ಲಿ ಇರುವ ಜಿಲ್ಲಾ ಉಸ್ತುವಾರಿ ಜಿ. ಜನಾರ್ದನರೆಡ್ಡಿ ಅವರ ವ್ಯವಸ್ಥಾಪಕ ನಿರ್ದೇಶಕತ್ವ, ಪಾಲುದಾರತ್ವ ಮತ್ತು ಗಣಿ ಗುತ್ತಿಗೆಯ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್, ಅನಂತಪುರಂ ಮೈನಿಂಗ್ ಕಾರ್ಪೊರೇಷನ್, ಓಬಳಾಪುರಂ ಮೈನಿಂಗ್ ಕಂಪನಿ, ಅಂತರಗಂಗಮ್ಮ ಮೈನಿಂಗ್ ಕಂಪನಿ, ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಹಾಗೂ ಬಳ್ಳಾರಿ ಐರನ್ ಓರ್ಸ್ ಪ್ರೈವೇಟ್ ಲಿಮಿಟೆಡ್ಗೆ ಈ ನೋಟೀಸ್ ಅನ್ನು ಸಿಬಿಐ ಅಧಿಕಾರಿಗಳು ಗುರುವಾರ ಜಾರಿ ಮಾಡಿದ್ದಾರೆ.
ಈ ನೋಟೀಸ್ ಪ್ರಕಾರ ಆಯಾ ಕಂಪನಿಗಳು ವಿದೇಶಗಳಿಗೆ ರಪ್ತು ಮಾಡಿರುವ ಹಾಗೂ ಸ್ಥಳೀಯ ಕೈಗಾರಿಕೆಗಳಿಗೆ ಮಾರಾಟ ಮಾಡಿರುವ ಕಬ್ಬಿಣದ ಅದಿರು, ಪ್ರಮಾಣ, ಗ್ರೇಡ್, ಬೆಲೆ ಇನ್ನಿತರೆಗಳ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು. ಕಬ್ಬಿಣದ ಅದಿರಯನ್ನು ರಪ್ತು ಮಾಡಿದಾಗ ನಡೆದ ವಿದೇಶಿ ವಿನಿಮಯ, ವಿದೇಶೀ ವ್ಯವಹಾರದ ತೆರಿಗೆ (ಕಸ್ಟಮ್ಸ್)ಯ ಸಂಪೂರ್ಣ ಮಾಹಿತಿ. ಆದಾಯ ತೆರಿಗೆ, ವ್ಯವಹಾರ ತೆರಿಗೆ ಸೇರಿ ವಿವಧ ಇಲಾಖೆಗಳಿಗೆ ಸಲ್ಲಿಸಿರುವ ಆಯವ್ಯಯ ಪತ್ರದ ಸಂಪೂರ್ಣ ಮಾಹಿತಿ.
ಆರು ಕಂಪನಿಗಳು ವಿವಿಧ ಬ್ಯಾಂಕ್ಗಳ ವಿವಿಧ ಖಾತೆಗಳಲ್ಲಿ ನಡೆಸುತ್ತಿರುವ ಆರ್ಥಿಕ ಚಟುವಟಿಕೆಗಳ ಸಂಪೂರ್ಣ ಮಾಹಿತಿ. ಆಯಾ ಕಂಪನಿಗಳಲ್ಲಿ ಇರುವ ಆಡಳಿತ/ನಿರ್ದೇಶಕರ ಆಯವ್ಯಯ, ಇನ್ನಿತರೆ ಚಟುವಟಿಕೆಗಳ ಮಾಹಿತಿ ಸೇರಿ ಇನ್ನಿತರೆ ಮಾಹಿತಿಗಳನ್ನು ಆದಷ್ಟು ಶೀಘ್ರದಲ್ಲೇ ಸಿಬಿಐಗೆ ಸಲ್ಲಿಸಬೇಕು ಎಂದು ನೋಟೀಸ್ನಲ್ಲಿ ಸ್ಪಷ್ಟಪಡಿಸಲಾಗಿದೆ.