ಸರಸ್ವತಿಯನ್ನು ಕೊಚ್ಚಿ ಕೊಚ್ಚಿ ಕೊಂದ ಪಾರ್ವತಿ
ನೆಮ್ಮದಿ ಬದುಕು ಹಾಳಾಯ್ತು:ವಿಟ್ಲ ಸಮೀಪದ ಉಕ್ಕುಡ ಅಪ್ಪೆರಿಪಾದೆ ನಿವಾಸಿ ಬಟ್ಯನಾಯ್ಕ ಮತ್ತು ಪಾರ್ವತಿ ದಂಪತಿಯ ಪುತ್ರ ರವಿ ಅಲಿಯಾಸ್ ರವೀಶನಿಗೆ 5 ವರ್ಷಗಳ ಹಿಂದೆ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ವೀರನಗರ ನಿವಾಸಿ ಪೂವಪ್ಪ ನಾಯ್ಕರ ಪುತ್ರಿ ಸರಸ್ವತಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಆಟೋಚಾಲಕನಾಗಿ ದುಡಿಯುತ್ತಿದ್ದ ರವಿ ಬಳಿಕ ಇತ್ತೀಚಿನ ದಿನಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಪತ್ನಿ ಸರಸ್ವತಿ, ತನ್ನ 4 ವರ್ಷದ ಪುಟ್ಟ ಮಗು ರೋಹಿತಾಕ್ಷ ಮತ್ತು ತಾಯಿ ಪಾರ್ವತಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದನು.
ಕಳೆದ 6 ತಿಂಗಳಿಂದ ಅತ್ತೆ ಪಾರ್ವತಿ ಮತ್ತು ಪತಿ ರವಿ ಆಗಾಗ ಸರಸ್ವತಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹಲ್ಲೆ ನಡೆಸುತ್ತಿದ್ದರೆಂದು ಸ್ಥಳೀಯರು ಹೇಳಿದ್ದಾರೆ. ಕೋರೆ ಮಾಲಿಕ ಒಕ್ಕೆತ್ತೂ ಕೊಡಂಗೆ ನಿವಾಸಿ ಕುಂಞ್ಞ ಯಾನೆ ಕುಂಞ್ಞಿಮೋನು ಪದೇ ಪದೇ ಪಾರ್ವತಿಯ ಮನೆಗೆ ಬಂದು ಹೋಗುತ್ತಿದ್ದು, ಅವರ ಮನೆ, ಜಾಗವನ್ನು ಖರೀದಿಸಲು ಮುಂದಾಗಿದ್ದ ಎಂದು ಹೇಳಲಾಗುತ್ತಿದೆ. ಜಾಗದ ವಿಚಾರಕ್ಕೆ ಸಂಬಂಧಿಸಿ ವಿರಸ ಹೆಚ್ಚಾಗಿದೆ. ಇದ್ದ ಜಾಗವನ್ನು ರವೀಶ ಮತ್ತು ಆತನ ತಾಯಿ ಪಾರ್ವತಿ ಮಾರಲು ಯತ್ನಿಸಿದ್ದರೆ ಸರಸ್ವತಿ ಇದನ್ನು ವಿರೋಧಿಸಿದ್ದರು.
ಪರಸ್ಪರ ಮಾತಿಗೆ ಮಾತು ನಡೆದ ಮರುಕ್ಷಣವೇ ಮೊದಲೇ ಸ್ಕೆಚ್ ಹಾಕಿದ್ದ ಅತ್ತೆ ಪಾರ್ವತಿ ಕತ್ತಿಯಿಂದ ಸೊಸೆಯ ಮೇಲೆ ಯದ್ವಾತದ್ವಾ ಕಡಿದಿದ್ದಾಳೆ. ಆದರೆ ಶಾರೀರಿಕವಾಗಿ ದೃಡ ಕಾಯಳಾಗಿದ್ದ ಸರಸ್ವತಿ ಕತ್ತಿಯೇಟಿನ ನಡುವೆಯೂ ಒಂದಿಷ್ಟು ಅತ್ತೆಯೊಂದಿಗೆ ಕಾದಾಟ ನಡೆಸಿದ್ದಾಳೆನ್ನಲಾಗಿದೆ. ಮರುಕ್ಷಣವೇ ಕೈಹಿಡಿದ ಪತಿ ರವೀಶನೂ ತನ್ನ ತಾಯಿಯೊಂದಿಗೆ ಸೇರಿ ಪತ್ನಿಯ ಮೇಲೆ ಮುಗಿಬಿದ್ದು ಕತ್ತಿಯಿಂದ ಮನಬಂದಂತೆ ಕಡಿದು ಮನೆ ಮುಂಭಾಗದ ಬಾಗಿಲ ಬುಡದಲ್ಲೇ ಪತ್ನಿ ಸರಸ್ವತಿಯನ್ನು ಭೀಕರವಾಗಿ ಹತ್ಯೆ ನಡೆಸಿದ್ದಾರೆ.
ಕಾಲು, ತಲೆ, ಸೊಂಟ, ಕೈ ಅಂಗಾಂಗಗಳಲ್ಲಿ ಸುಮಾರು ಹತ್ತಕ್ಕೂ ಅಧಿಕ ಕತ್ತಿಯಿಂದ ಕಡಿದ ಕುರುಹುಗಳಿದ್ದು, ರಕ್ತದೋಕುಳಿಯಲ್ಲಿ ಶವ ಮುಳುಗಿ ಹೋಗಿದೆ. ಇಷ್ಟೆಲ್ಲಾ ನಡೆಯುವಾಗ ದೂರದಿಂದಲೇ ನೋಡುತ್ತಿದ್ದ ಕೋರೆಮಾಲಿಕ ಕುಂಞ್ಞ ಸ್ಥಳದಿಂದ ಕಾಲ್ಕಿತ್ತು ಭೂಗತನಾಗಿ ಏನೂ ಅರಿಯದ ಮುಗ್ದನಂತೆ ನಾಟಕ ಮಾಡುತ್ತಿದ್ದಾನೆ. ಅತ್ತ ಸೊಸೆಯನ್ನು ಕೈಯಾರೆ ಕೊಲೆ ನಡೆಸಿದ(ಅತ್ತೆ) ಪಾರ್ವತಿ ಕುಂಞ್ಞಿಯ ಆಜ್ಞೆಯಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಾನು ಎಸೆಗಿದ ಘನಕಾರ್ಯವನ್ನು ಪೊಲೀಸರ ಮುಂದೆ ತಿಳಿಸಿದ್ದಾಳೆ.