ರಾಜ್ಯಸಭೆ: ಹೇಮಮಾಲಿನಿ ಕರ್ನಾಟಕ ಅಭ್ಯರ್ಥಿ
ಮಾಜಿ ಸಚಿವ ಹಾಗೂ ದೆಹಲಿ ಪ್ರತಿನಿಧಿಯಾಗಿರುವ ಧನಂಜಯ ಕುಮಾರ್ರನ್ನು ಕಣಕ್ಕಿಳಿಸಲು ಯಡಿಯೂರಪ್ಪ ಒಲವು ತೋರಿದ್ದರೆ, ಮಾಜಿ ಸಂಸದರಾಗಿರುವ ಕೋಳೂರು ಬಸವನಗೌಡರಿಗೆ ಟಿಕೆಟ್ ನೀಡುವಂತೆ ಜನಾರ್ದನ ರೆಡ್ಡಿ ಪ್ರತಿಪಟ್ಟು ಹಿಡಿದಿದ್ದರು. ಧನಂಜಯ ಕುಮಾರ್ಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ. ಅವರಿಗಿಂತಲೂ ಕೋಳೂರು ಬಸವನ ಗೌಡರಿಗೆ ಟಿಕೆಟ್ ನೀಡುವುದು ಸೂಕ್ತ ಎನ್ನುವುದು ರೆಡ್ಡಿ ಸೋದರರ ವಾದವಾಗಿದೆ.
ಜನಾರ್ದನ ರೆಡ್ಡಿ ಕಡೆಯಿಂದ ಮತ್ತೆ ಕಿರಿಕಿರಿ ಆರಂಭವಾಗುತ್ತಿದ್ದಂತೆ ದಿಲ್ಲಿಗೆ ಹೋಗಿದ್ದ ಯಡಿಯೂರಪ್ಪ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ ಬಂದಿದ್ದರು. ಎರಡೂ ಬಣದ ಅಭಿಪ್ರಾಯ ಸಂಗ್ರಹ ಮಾಡಿದ ನಂತರ ಕನಸಿನ ಕನ್ಯೆ ಹೇಮಮಾಲಿನಿ ಅವರಿಗೆ ಅವಕಾಶ ನೀಡಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ. ಈ ನಿರ್ಧಾರದಿಂದ ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಏಳುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಸಭೆ ಮರು ಚುನಾವಣೆಗೆ ಫೆ. 21 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ನಾಮ ಪತ್ರ ಹಿಂಪಡೆಯಲು ಫೆ.24 ಅಂತಿಮ ದಿನ, ಮಾರ್ಚ್ 3 ರಂದು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದೆ.