ರಜೆಗೆಂದು ಬಂದ ಗಣೇಶನ ಕೊಂದ ಕುಪೇಂದ್ರ
ಕೊಲೆಯಾದ ವ್ಯಕ್ತಿಯನ್ನು ಮೇಗಿನಪಾಳ್ಯ, ಚೆಳ್ಳಿಕೆರೆ ನಿವಾಸಿ ಗಣೇಶ ಪ್ರಸಾದ್ (24). ಗಣೇಶಪ್ರಸಾದ್ನನ್ನು ಕಮ್ಮನಹಳ್ಳಿಯ ನಿವಾಸಿ ಕುಪೇಂದ್ರ ಕೊಲೆಗೈದ ಆರೋಪಿ. ಗಣೇಶ ಹಬ್ಬದ ಸಂದರ್ಭದಲ್ಲಿ ಈ ಇಬ್ಬರಿಗೂ ಸಣ್ಣ ಮಟ್ಟದ ಜಗಳ ನಡೆದಿತ್ತು. ಆಗ ಸರಿಯಾಗಿ ಒದೆ ತಿಂದಿದ್ದ ಕುಪೇಂದ್ರ, ಆಸ್ಪತ್ರೆ ಸೇರಿದ್ದ. ಆಸ್ಪತ್ರೆ ಖರ್ಚಿಗೆ 1 ಲಕ್ಷ ನೀಡು ಎಂದು ಗಣೇಶ ಹಾಗೂ ಅವರ ಅಣ್ಣ ವಿಜಯ್ ಕುಮಾರ್ ಗೆ ತಾಕೀತು ಮಾಡಿದ್ದ. ಆದರೆ, ಇದಕ್ಕೆ ನಿರಾಕರಿಸಿದ ಗಣೇಶ, ಮುಂಬೈಗೆ ತೆರಳಿದ್ದ.
ಘಟನೆ ವಿವರ: ಗಣೇಶನಿಗಾಗಿ ಕಾಯುತ್ತಿದ್ದ ಕುಪೇಂದ್ರನಿಗೆ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿನ ಬಾರ್ ನಲ್ಲಿ ಗಣೇಶ ಕುಡಿಯುತ್ತಾ ಕುಳಿತಿರುವ ಸುದ್ದಿ ಸಿಕ್ಕಿದೆ. ನಂತರ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಆರೋಪಿ ಕುಪೇಂದ್ರ ಹರಿತವಾದ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ಗಣೇಶ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಿಸದೆ ಗಣೇಶ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಮೃತದೇಹವನ್ನು ನಗರದ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಗಿದೆ. ಬಾಣಸವಾಡಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿ ಕುಪೇಂದ್ರನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ.