ರೆಡ್ಡಿಗಳ ಗಣಿಗಳ ಮೇಲೆ ಸಿಬಿಐ ನಿರಂತರ ದಾಳಿ
ಸಚಿವ ಜಿ. ಜನಾರ್ದನರೆಡ್ಡಿ ಅವರ ನಿರ್ದೇಶಕತ್ವದ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ನ ಅಂಗ ಸಂಸ್ಥೆ ಆಗಿರುವ ಅನಂತಪುರಂ ಮೈನಿಂಗ್ ಕಂಪನಿಯ ಗುತ್ತಿಗೆಗೆ ಒಳಪಟ್ಟಿರುವ 'ಅಂತರಗಂಗಮ್ಮ ಕೊಂಡ" ಗಣಿಯಲ್ಲಿ ಶೇ. 62 ರಿಂದ 67 ಗ್ರೇಡ್ ಅದಿರು ಇದೆ ಎಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಹಿನ್ನಲೆಯಲ್ಲಿ ಸಿಬಿಐ ತಂಡ ಭೇಟಿ ನೀಡಿದೆ.
ಎಜಿಕೆ ಪ್ರದೇಶಕ್ಕೆ ಬಂದ ಡಿಐಜಿ ಲಕ್ಷ್ಮಿನಾರಾಯಣ ನೇತೃತ್ವದ ಸಿಬಿಐ ತಂಡದಲ್ಲಿ ಡಿಎಸ್ಪಿ ಆರ್.ಎಂ. ಖಾನ್, ಎಸ್ಪಿ ವೆಂಕಟೇರ್ಶ, ಇನ್ಸ್ಪೆಕ್ಟರ್ ಕೆ. ಪ್ರವೀಣ್ಕುಮಾರ್, ಐಬಿಎಂನ ದಾಸ್, ಕೆ.ವಿ. ರಾವ್, ಪ್ರಮುಖ ಸಾಕ್ಷಿದಾರರಾಗಿ ಕಾರ್ಪೊರೇಷನ್ ಬ್ಯಾಂಕ್ನ ಎಂ.ಬಿ. ಹುಬ್ಬಳ್ಳಿ, ವಿಮಾ ಕಂಪನಿಯ ಓರ್ವ ಅಧಿಕಾರಿ, ಎನ್ಎಂಡಿಸಿಯ ಹಿರಿಯ ಭೂ ವಿಜ್ಞಾನಿ ಡಾ. ಮುಖರ್ಜಿ ಇದ್ದರು.
ಎಜಿಕೆ ಗಣಿ ಪ್ರದೇಶದಲ್ಲಿ ಇರುವ ಏಳು ಬೆಂಚ್ಗಳಲ್ಲಿ ತಲಾ 100 ಮೀಟರ್ ಅಂತರದಲ್ಲಿ ಒಂದು ಕಡೆಯಂತೆ ಒಟ್ಟು 28 ಸ್ಥಳಗಳಲ್ಲಿ ಕಬ್ಬಿಣದ ಅದಿರನ್ನು ತಂಡ ಸಂಗ್ರಹ ಮಾಡಿತು. ಎಜಿಕೆಯ ಮೈನ್ಸ್ ಮೇನೇಜರ್ಗಳಾದ ಲಕ್ಷ್ಮೀಪತಿ ಹಾಗೂ ಶಿವಕುಮಾರ್ ಹಾಜರಿದ್ದರು.
ಸಿಬಿಐ ತಂಡ 28 ಕಡೆಗಳಲ್ಲಿ ಸಂಗ್ರಹ ಮಾಡಿರುವ ಕಬ್ಬಿಣದ ಅದಿರಿನ ಗ್ರೇಡ್ನ ನಿಖರತೆಯನ್ನು ಪರೀಕ್ಷಿಸಲು ಓಎಂಸಿ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲೇ ಕ್ರಷರ್ಗೆ ಹಾಕಿ ಗ್ರೇಡ್ ನಿಗದಿ ಮಾಡಲಾಗುತ್ತದೆ. ಇದೇ ರೀತಿಯಲ್ಲಿ ಗುರುವಾರ ಓಎಂಸಿ ಗಣಿ ಪ್ರದೇಶದಲ್ಲಿ ಅದಿರು ಪರೀಕ್ಷಿಸಲಾಗುತ್ತದೆ ಎಂದು ತಂಡ ತಿಳಿಸಿದೆ. ತನಿಖೆ 3 ದಿನಗಳ ಕಾಲ ನಡೆಯಲಿದೆ.