ಖಾನ್ ವಿರುದ್ಧ ಎಫ್ಐಆರ್: ಉಪಸಭಾಪತಿ ಅಮಾನತ್?
1998ರಿಂದ 2002ರವರೆಗೆ ರೆಹಮಾನ್ ಖಾನ್ ಈ ಬ್ಯಾಂಕ್ನ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ನಡೆದಿದ್ದ 102.02 ಕೋಟಿ ರು. ಹಣ ದುರುಪಯೋಗವು ಸಹಕಾರ ಇಲಖೆ ಅಧಿಕಾರಿಗಳ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ರೆಹಮಾನ್ ಖಾನ್ ಸೇರಿದಂತೆ 8 ಮಂದಿ ಹಾಗೂ ಒಂದು ಸಂಸ್ಥೆ ವಿರುದ್ಧ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.
ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಶೆಹರ್ಬಾನು ಅವರ ತನಿಖಾ ವರದಿ ಆಧರಿಸಿ ರೆಹಮಾನ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ), 106 (ನಂಬಿಕೆ ದ್ರೋಹ) 109 ಹಾಗೂ 120 ಬಿ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪೂರ್ಣ ವಿವರಗಳನ್ನು ಕೇಂದ್ರ ಸರಕಾರಕ್ಕೆ ಕಳಿಸಲಾಗುವುದು ಎಂದು ಸಚಿವರು ಹೇಳಿದರು. ವಂಚನೆ, ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳಡಿ ಖಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ರೆಹಮಾನ್ ಖಾನ್ ರ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಕುತ್ತು ಬರುವ ನಿರೀಕ್ಷೆಯಿದೆ.
ಏನಿದು ಪ್ರಕರಣ: ಅಮಾನತ್ ಬ್ಯಾಂಕ್ 1977ರಲ್ಲಿ ಸ್ಥಾಪನೆಯಾಗಿದ್ದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇದು ರಾಜ್ಯದಲ್ಲಿ ಪ್ರಥಮ ಷೆಡ್ಯೂಲ್ ಬ್ಯಾಂಕ್ ಆಗಿದೆ. ಬ್ಯಾಂಕ್ನ ನರಸಿಂಹರಾಜ ರಸ್ತೆ ಶಾಖೆಯಲ್ಲಿ 98 ರಿಂದ 2002ರವರೆಗೆ ನಡೆದ ಅವ್ಯವಹಾರಗಳನ್ನು ಆರ್ಬಿಐ ಪತ್ತೆಹಚ್ಚಿತ್ತು. 48 ಬೇನಾಮಿ ಸಾಲಗಳ ಮೊತ್ತವೇ 57.66 ಕೋಟಿ ರು. ಭದ್ರತೆ ಇಲ್ಲದ ಸಾಲಗಳ ಮೊತ್ತ 102.02 ಕೋಟಿ ರು. ದುರುಪಯೋಗ ನಡೆದಿರುವುದು ಸಹಕಾರ ಕಾಯ್ದೆಯಡಿ ನಡೆದ ವಿಚಾರಣೆಯಿಂದ ಸಾಬೀತಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನ ಬಾಜಿ ಅಧ್ಯಕ್ಷ ರೆಹಮಾನ್ ಖಾನ್ ಅವರು ಕಳೆದ ವರ್ಷ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 18ರಂದು ಆದೇಶ ನೀಡಿದ್ದ ಹೈಕೋರ್ಟ್, ನಾಲ್ಕು ವಾರದೊಳಗೆ ರಿಟ್ ಅರ್ಜಿದಾರರು ಸಹಕಾರ ಸಂಘಗಳ ಜಂಟಿ ನಿಬಂಧಕರ ಮುಂದೆ ಮನವಿ ಸಲ್ಲಿಸತಕ್ಕದ್ದು ಎಂದು ಸೂಚಿಸಿತು.
ಅದಲ್ಲದೆ, ಈ ಮನವಿಗಳ ಬಗ್ಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ನ್ಯಾಯಾಲಯದ ಆದೇಶದ ಮೂರು ತಿಂಗಳೊಳಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿತು. ಈ ಆದೇಶದನ್ವಯ ಈ ತಿಂಗಳ 18ಕ್ಕೆ ಮೂರು ತಿಂಗಳ ಸಮಯ ಮೀರಿತ್ತಿತ್ತು. ಹೀಗಾಗಿ ಬುಧವಾರ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.