ಅದಿರು ರಫ್ತು ನಿಷೇಧ ತೆರವಿಗೆ ಸು.ಕೋರ್ಟ್ ಆದೇಶ
ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಮತ್ತು ನ್ಯಾ. ಎ.ಕೆ. ಪಟ್ನಾಯಕ್ ಅವರಿದ್ದ ವಿಭಾಗೀಯ ಪೀಠ, ಮಾರ್ಚ್ 31ರೊಳಗಾಗಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಸೂಕ್ತ ಕಾನೂನನ್ನು ರೂಪಿಸಬೇಕೆಂದೂ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮಾರ್ಚ್ ಅಂತ್ಯದೊಳಗಡೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕಾಯ್ದೆ ತರದಿದ್ದರೆ ಗಣಿಗಾರಿಕೆ ನಡೆಸುತ್ತಿರುವ ಸಂಸ್ಥೆಗಳು ಮಧ್ಯಂತರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದೂ ಹೇಳಿದ್ದು, ರಫ್ತು ನಿಷೇಧದಿಂದ ಆತಂಕಕ್ಕೀಡಾಗಿದ್ದ ಗಣಿ ಮಾಲಿಕರಿಗೆ ತಾತ್ಕಾಲಿಕ ಜಯ ದೊರೆತಂತಾಗಿದೆ.
ಕರ್ನಾಟಕದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಆರೋಪಗಳು ಬರಲು ಪ್ರಾರಂಭಿಸಿದ ಮೇಲೆ, ಜುಲೈ 10, 2010ರಂದು ರಾಜ್ಯದ 10 ಪ್ರಮುಖ ಬಂದಿರುಗಳಲ್ಲಿ ಅದಿರು ರಫ್ತು ನಿಷೇಧ ಹೇರಿ ಕರ್ನಾಟಕ ಸರಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಗಣಿ ಮಾಲಿಕರು ನ್ಯಾಯಾಲಯದ ಕದವನ್ನು ಬಡಿದಿದ್ದರು.
ಪ್ರಮುಖವಾಗಿ ಕಾರವಾರ ಮತ್ತು ಬೇಲೇಕೇರಿ ಬಂದರುಗಳ ಪಟ್ಟಿಯಲ್ಲಿ ಸೇರಿವೆ. ಉಳಿದಂತೆ ತದಡಿ, ಭಟ್ಕಳ, ಮಲ್ಪೆ, ಹಳೆ ಮಂಗಳೂರು ಹೊನ್ನಾವರ, ಕುಂದಾಪುರ, ಹಂಗಾರಕಟ್ಟೆ, ಪಡುಬಿದ್ರಿ ಬಂದರುಗಳಿಂದ ಸಹ ಅದಿರು ರಫ್ತು ನಿಷೇಧಿಸಲಾಗಿದೆ.