ಇಡಗುಂಜಿ ದೇವಸ್ಥಾನದಲ್ಲಿ ಅರ್ಚಕರಿಂದ ಮಾರಾಮಾರಿ
ಕನ್ನಡ ನಾಡಿನ ದೇವಾಲಯಗಳಲ್ಲಿ ಇಂತಹ ಅಪವ್ಯಸನಗಳು ಸಂಭವಿಸದು ಎಂಬ ದೃಢ ವಿಶ್ವಾಸ ಇಲ್ಲಿನ ಭಕ್ತಾಧಿಗಳದು. ಆದರೆ ಇದಕ್ಕೆ ಸಂಚಕಾರ ತರುವ ಘಟನೆ ಸುಪ್ರಸಿದ್ಧ ಇಡಗುಂಜಿ ಗಣೇಶನ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದೆ. ಆಘಾತಕಾರಿ ಸಂಗತಿಯೆಂದರೆ ಈ ಮಾರಾಮಾರಿ ಘಟನೆ ಇಡಗುಂಜಿ ಪ್ರಾಂಗಣದಲ್ಲೇ ಕೊನೆಗೊಳ್ಳದೆ, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಏನಾಗಿದೆಯೆಂದರೆ, ಉತ್ತರ ಕನ್ನಡದ ಇಡಗುಂಜಿ ದೇವಸ್ಥಾನದಲ್ಲಿ ಗಣೇಶನಿಗೆ ಪೂಜೆ ಮಾಡುವ ಹಕ್ಕಿಗಾಗಿ ವಂಶಪಾರಂಪರ್ಯವಾಗಿ ಬೆಳೆದುಬಂದ ಅರ್ಚಕರು ಮತ್ತು ದೇವಸ್ಥಾನದ ಟ್ರಸ್ಟಿಗಳ ಮಧ್ಯೆ ಆಗಾಗ ಕಿತ್ತಾಟ ನಡೆಯುತ್ತಿದೆ. ಹಾಗೆಂದೇ ಮೊನ್ನೆಯೂ ಗರ್ಭಗುಡಿಯಲ್ಲಿ ಗಣೇಶನ ಪೂಜಾಕೈಂಕರ್ಯಗಳು ಸಾಂಗೋಪಾಂಗವಾಗಿ ನಡೆದಿತ್ತು. ಆ ಗಳಿಗೆಯಲ್ಲಿ ಅದೆಲ್ಲಿಂದ ಬಂತೋ ಮತ್ತೊಂದು ಅರ್ಚಕರ ಗುಂಪು ಗರ್ಭಗುಡಿಯಲ್ಲೇ ಕೈಕೈ ಮಿಲಾಯಿಸಿದೆ. ಪೂಜೆಯಲ್ಲಿ ನಿರತರಾಗಿದ್ದ ಅರ್ಚಕರನ್ನು ಅಟ್ಟಾಡಿಸಿಕೊಂಡು ಬಡಿದಿದೆ. ದೂರದೂರುಗಳಿಂದ ಬಂದಿದ್ದ ಭಕ್ತರು ಇದನ್ನು ಕಣ್ಣಾರೆ ಕಂಡು ಶಿವ, ಶಿವ ಎಂದಿದ್ದಾರೆ.
ಆದರೆ ಸ್ಥಳೀಯರಿಗೆ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ. ಟ್ರಸ್ಟಿಗಳು ನೇಮಿಸಿದ ಅರ್ಚಕರದ್ದು ಒಂದು ಗುಂಪು ಮತ್ತು ಸಾಂಪ್ರದಾಯಿಕವಾಗಿ ಪೂಜೆ ಮಾಡಿಕೊಂಡು ಬಂದಿರುವ ಅರ್ಚಕರದ್ದು ಮತ್ತೊಂದು ಗುಂಪು ಇಲ್ಲಿ ದಿನಬೆಳಗಾದರೆ ಪರಸ್ಪರ 'ಪೂಜೆ'ಯಲ್ಲಿ ತೊಡಗುವುದು ಸಾಮಾನ್ಯವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಅರ್ಚಕರು, ಪರಸ್ಪರ ಬೆಂಬಲಿಗರನ್ನೂ ಸೃಷ್ಟಿಸಿಕೊಂಡಿದ್ದಾರೆ. ಅರ್ಚಕರು ಕಾದಾಟಕ್ಕೆ ಇಳಿಯುತ್ತಿದ್ದಂತೆ ಇವರು ಒಂದು ಕೈ ನೋಡಿಕೊಳ್ಳುತ್ತಾರೆ. ಕೆಲವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಸಹ ಹೊರಡಿಸಲಾಗಿದೆ. ಇಷ್ಟೆಲ್ಲ ಆದರೂ ಪರಿಸ್ಥಿತಿ ಇಂದಿಗೂ ತಿಳಿಯಾಗದಿರುವುದು ದುರ್ದೈವದ ಸಂಗತಿಯಾಗಿದೆ.