ವಿಂಡ್ಸರ್ ಮ್ಯಾನರ್ ಹೋಟೆಲ್ ತೆರವಿಗೆ ಗಡುವು
ಅನಧಿಕೃತವಾಗಿ ಸಾರ್ವಜನಿಕ ಸ್ಥಳವನ್ನು ವಶಪಡಿಸಿಕೊಂಡಿರುವ ವಿಂಡ್ಸರ್ ಮ್ಯಾನರ್ ಹೋಟೆಲ್ನ್ನು ಕೂಡಲೇ ತೆರವು ಮಾಡಬೇಕೆಂದು ವಕ್ಫ್ ಮಂಡಳಿ ರಾಜ್ಯ ಅನಧಿಕೃತ ಸ್ಥಳ ತೆರವು ಕಾಯಿದೆ(Karnataka Public Premises (Eviction of Unauthorised Occupants) Act) ಯಡಿ ಸೂಚಿಸಿತ್ತು. ಈ ಕ್ರಮ ಪ್ರಶ್ನಿಸಿ ಹೋಟೆಲ್ ಆಡಳಿತ ಮಂಡಳಿ(ITC Group) ನ್ಯಾಯಾಲಯದ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ನಾಗಮೋಹನ ದಾಸ್ ಅವರು ಕಾನೂನು ಪ್ರಕಾರ ತನಗೆ ಸೇರಿದ ಜಾಗದಲ್ಲಿರುವ ಗುತ್ತಿಗೆದಾರರನ್ನು ಸಾರ್ವಜನಿಕ ಸ್ಥಳದಿಂದ ಹೊರ ಹಾಕುವ ಅಧಿಕಾರ ವಕ್ಫ್ ಮಂಡಳಿಗೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಿಂಗಳ ಬಾಡಿಗೆ ಎಷ್ಟು?: ಗುತ್ತಿಗೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣ ಮಾಡುವಂತೆ ಸೂಚಿಸಿತು. ಅದುವರೆಗೆ ತಿಂಗಳಿಗೆ ಆರು ಲಕ್ಷ ರೂ.ಗಳನ್ನು ಬಾಡಿಗೆಯನ್ನಾಗಿ ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಹೋಟೆಲಿನ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. 70ರ ದಶಕದಲ್ಲಿ ವಿಂಡ್ಸರ್ ಮ್ಯಾನರ್ ಹೋಟೆಲ್ ನಡೆಸಲು ತಿಂಗಳಿಗೆ ಕೇವಲ ಐದು ಸಾವಿರ ರೂ. ಬಾಡಿಗೆ ರೂಪದಲ್ಲಿ ವಕ್ಫ್ ಮಂಡಳಿ ಪಡೆಯುತ್ತಿತ್ತು. ಆದರೆ ಗುತ್ತಿಗೆ ಅವಧಿ ಮುಗಿದ ನಂತರವೂ ಹೋಟೆಲ್ ಆಡಳಿತ ಮಂಡಳಿ ಅಕ್ರಮವಾಗಿ ತನ್ನ ಕಾರ್ಯಾಚರಣೆ ಮುಂದುವರೆದಿತ್ತು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಕೂಗಳತೆ ದೂರದಲ್ಲಿರುವ ಈ ಕಟ್ಟಡವನ್ನು ಅಗಾ ಅಲಿ ಅಸ್ಕರ್ ಅವರು ಮುಸ್ಲಿಂ ಸಮುದಾಯಕ್ಕೆ ಬಳಸುವಂತೆ ಸೂಚಿಸಿ ವಕ್ಫ್ ಮಂಡಳಿಗೆ ನೀಡಿದ್ದರು. 1973ರಲ್ಲಿ ಮೋನಾರ್ಕ್ ಕಾರ್ಪೊರೇಷನ್ ಗೆ 30 ವರ್ಷಗಳ ಕಾಲ ಭೋಗ್ಯಕ್ಕೆ ಕಟ್ಟಡ ನೀಡಲಾಗಿತ್ತು.
ಆದರೆ, ವಕ್ಫ್ ಮಂಡಳಿಗೆ ತಿಳಿಯದಂತೆ ವಿಶ್ವರಾಮ್ ಹೋಟೆಲ್ ಪ್ರೈ. ಲಿ, ವೆಲ್ ಕಮ್ ಗ್ರೂಪ್ ಹಾಗೂ ಐಟಿಸಿ ಸಮೂಹ ಕಟ್ಟಡದ ಮೇಲೆ ಹಕ್ಕು ಸ್ಥಾಪಿಸತೊಡಗಿತ್ತು. ಇದನ್ನು ಗಮನಿಸಿದ ಅಂಜುಮನ್ ಎಲ್ಮಾಮಿಯಾ ಹಾಗೂ ಇತರೆ ಶಿಯಾ ಸದಸ್ಯರು ಕಟ್ಟಡವನ್ನು ತೆರವುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.