ಹಣ್ಣುಗಳ ರಾಜ ಮಾರುಕಟ್ಟೆ ಪ್ರವೇಶ ನಿಧಾನ
ಮಾವಿನಮರಗಳಲ್ಲಿ ಹೂವುಗಳು ತಡವಾಗಿ ಅರಳುತ್ತಿದೆ. ವಾಡಿಕೆಯಂತೆ ಡಿಸೆಂಬರ್ ತಿಂಗಳ ಕೊನೆ ವಾರ ಅಥವಾ ಜನವರಿ ಮೊದಲ ಅಥವಾ ಎರಡನೇ ವಾರದ ವೇಳೆಗೆ ಹೂವುಗಳು ಪೂರ್ಣವಾಗಿ ಅರಳಬೇಕಾಗಿತ್ತು. ಪ್ರತಿ ಬಾರಿ ಏಪ್ರಿಲ್ ಕೊನೆಗೆ ಅಥವಾ ಮೇ ಮೊದಲ ವಾರದ ಹೊತ್ತಿಗೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಆದರೆ, ಈಗ ಒಂದು ತಿಂಗಳು ತಡವಾಗಿದೆ. ಈ ಬಾರಿ ಮೇ ಕೊನೆ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ಇಳುವರಿಯಲ್ಲಿ ತೊಂದರೆ ಇಲ್ಲ: ಮಾರುಕಟ್ಟೆ ಪ್ರವೇಶ ತಡವಾದರೂ ಈ ಬಾರಿ ರೈತರಿಗೆ ನಷ್ಟವಾಗುವ ಸಾಧ್ಯತೆ ಕಮ್ಮಿ. ಈ ಬಾರಿ ಮಾವಿನ ಇಳುವರಿ ಭರ್ಜರಿಯಾಗಿ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪೂರ್ಣ ಇಳುವರಿ ಕಾಣದೆ, ಪ್ರಕೃತಿ ವಿಕೋಪಗಳಿಗೆ ಸಿಲುಕು ತತ್ತರಿಸಿದ ರೈತರು ಈ ಬಾರಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಹೇಳುತ್ತಾರೆ. ಒಟ್ಟಿನಲ್ಲಿ ಹಣ್ಣುಗಳ ರಾಜನ ಆಗಮನಕ್ಕೆ ರಾಜಧಾನಿಯಲ್ಲಿ ಸಿದ್ಧತೆ ನಡೆದಿದೆ. ಗ್ರಾಹಕರು ಮುಗಿಬಿದ್ದು ಖರಿದೀಸುತ್ತಾರೆ ಎಂಬ ಆಶಾಭಾವ ಶ್ರೀನಿವಾಸಪುರ ರೈತರಲ್ಲಿ ಮನೆ ಮಾಡಿದೆ.
ಟಿಪ್ಪಣಿ: ರಾಜ್ಯದಲ್ಲಿ ಬೆಳೆಯಲಾಗುವ ಒಟ್ಟು ಮಾವಿನ ಬೆಳೆಯ ಪ್ರಮಾಣ(ಸುಮಾರು 1,17,381 ಹೆಕ್ಟೇರು)ದಲ್ಲಿ ಶೇ.47ರಷ್ಟು ಕೋಲಾರ ಜಿಲ್ಲೆಯಲ್ಲಿಯೇ ಕಾಣಬಹುದು. ಮಾವಿನ ತವರೂರು ಎಂದೇ ಖ್ಯಾತಿ ಗಳಿಸಿರುವ ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲಭಾಗದಲ್ಲಿ ಹೆಚ್ಚೆಚ್ಚು ಫಲವನ್ನು ಕಾಣಬಹುದು. ಕಳೆದ ಎರಡು ವರ್ಷಗಳಲ್ಲಿ ಇಳುವರಿ ವ್ಯತ್ಯಯದ ನಡುವೆಯೂ 4 ರಿಂದ 5 ಲಕ್ಷ ಟನ್ ಮಾವು ಬೆಳೆಯಲಾಗಿತ್ತು. ಈ ಬಾರಿ ಅದಕ್ಕಿಂತಲ್ಲೂ ಹೆಚ್ಚಿನ ಫಸಲು ಬರುವ ನಿರೀಕ್ಷೆಯಿದೆ.