ಸಜ್ಜನ ಪ್ರಕಾಶ್ ಶ್ರದ್ಧಾಂಜಲಿಗೆ ನಾಮುಂದು ತಾಮುಂದು
ಪ್ರಕಾಶ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಡಲಾಗಿದೆ. ಪ್ರಕಾಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಫ್ರೀಡಂ ಪಾರ್ಕ್ನತ್ತ ಧಾವಿಸಿದ ಅನೇಕ ರಾಜಕಾರಣಿಗಳು, ಮಠಾಧೀಶರು, ಸಾಹಿತಿ ಮಿತ್ರರು ಪ್ರಕಾಶ್ರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಮೃತರ ಅಂತಿಮ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಫ್ರೀಡಂ ಪಾರ್ಕ್ ಬಳಿ ಜಮಾಯಿಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಜೆಡಿಎಸ್ನ ಹಿರಿಯ ಪಿಜಿಆರ್ ಸಿಂಧ್ಯಾ, ಕೆಪಿಸಿಸಿ ಅಧ್ಯಕ್ಷ ಡಾ. ಡಿ.ಪಿ. ಪರಮೇಶ್ವರ ಮೃತರ ಅಂತಿಮ ದರ್ಶನ ಪಡೆದರು.
ಅತ್ತ ಪ್ರಕಾಶ್ರ ಹುಟ್ಟೂರಾದ ಹೂವಿನಹಡಗಲಿ ಶೋಕ ಸಾಗರದಲ್ಲಿ ಮುಳುಗಿದೆ. ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅಂತ್ಯಕ್ರಿಯೆ ಹೂವಿನಹಡಗಲಿಯಲ್ಲಿ ಗುರುವಾರ ನೆರವೇರಲಿದೆ.
'ಹಿರಿಯರು, ಕಿರಿಯರಿಗೆ ಸಮಾಜವಾದದ ಓನಾಮಗಳನ್ನು ಮನಮುಟ್ಟುವಂತೆ ಬೋಧಿಸುತ್ತಿದ್ದ ಪ್ರಕಾಶ್ ಸಾವು ಅತ್ಯಂತ ದುಃಖಕರವಾಗಿದೆ. ಬಡವ ಬಲ್ಲಿದ, ಶ್ರೀಮಂತ ಎಂಬ ತಾರತಮ್ಯ ಮಾಡದವರಲ್ಲ. ಅತ್ಯುತ್ತಮ ಆಡಳಿತಗಾರ. ರಾಜಕೀಯಕ್ಕೂ ಸಾಹಿತ್ಯ ಲೋಕಕ್ಕೂ ನಂಟು ಬೆಳೆಸಿದವರು. ಪ್ರಕಾಶ್ ಇದ್ದಾರೆ ಎಂಬ ಕಾರಣಕ್ಕೇ ರಾಜಕೀಯವಾಗಿ ಗುರುತಿಸಿಕೊಳ್ಳುತ್ತಿದ್ದೆವು' ಎಂದು ಅಂತಿಮ ನಮನ ಸಲ್ಲಿಸಿದ ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಂ ಹೇಳಿದ್ದಾರೆ.
'ಇಡೀ ರಾಜ್ಯದ ಜನತೆಗೆ ಭರಿಸಲಾಗದ ದುಃಖವಾಗಿದೆ' ಎಂದು ಜೆಡಿಎಸ್ನ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಪಕ್ಷದ ವಕ್ತಾರ ವೈಎಸ್ವಿ ದತ್ತಾ ಸಹ ರೇವಣ್ಣ ಜತೆಗೂಡಿ ಪ್ರಕಾಶ್ರ ಪಾರ್ಥಿವ ಶರೀರದ ದರ್ಶನ ಪಡೆದರು.
'ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆದಿದ್ದಾರೆ ಎಂದು ಸಂತಸ ಗೊಂಡಿದ್ದೆವು. ಅವರ ಮಾರ್ಗದರ್ಶನ ನಮ್ಮಂಥವರಿಗೆ ಇನ್ನೂ ದೊರಕುತ್ತದೆ ಎಂದು ಭಾವಿಸಿದ್ದೆವು. ಆದರೆ ಪ್ರಕಾಶ ನಂದಿದೆ. ದುಃಖವಾಗುತ್ತಿದೆ' ಎಂದವರು ಜೆಡಿಎಸ್ನ ಮತ್ತೋರ್ವ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.