ಅಜಾತಶತ್ರು, ಮುತ್ಸದ್ದಿ ಎಂಪಿ. ಪ್ರಕಾಶ್ ಇನ್ನಿಲ್ಲ
ಜನತಾ ಪರಿವಾರದ ಹಿರಿಯ ರಾಜಕಾರಣಿಯಾಗಿದ್ದ ಮಠದ ಪಾಟೀಲ್ ಪ್ರಕಾಶ್ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಲೇಖಕ, ರಂಗಕರ್ಮಿ, ನಟ ಸಹ ಆಗಿದ್ದ ಮೃತರು ಪತ್ನಿ, ಒಬ್ಬ ಮಗ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸಾರ್ವಜನಿಕ ದರ್ಶನಕ್ಕಾಗಿ ಪ್ರಕಾಶ್ ಪಾರ್ಥಿವ ಶರೀರವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಡಲಾಗಿದೆ. ಅಂತ್ಯಕ್ರಿಯೆ ಹೂವಿನಹಡಗಲಿಯಲ್ಲಿ ಗುರುವಾರ ನೆರವೇರಲಿದೆ.
ಉದ್ಯಮಿಯಾಗಿಯೂ ಮಿಂಚಿದ್ದ ಎಂಪಿ ಪ್ರಕಾಶ್
ಸಾಂಸ್ಕೃತಿಕ ಲೋಕದಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡಿದ್ದ ನಿರ್ಮತ್ಸರ ಗುಣದ ಪ್ರಕಾಶ್, ಉತ್ತಮ ವಾಗ್ಮಿ ಸಹ. ಕೆಲವು ವರ್ಷಗಳಿಂದ ಅವರು ಕ್ಯಾನ್ಸರ್ ಪೀಡಿತರಾಗಿದ್ದರು. ಆದರೂ ರಾಜಕೀಯವಾಗಿ ಮತ್ತು ಸಾಹಿತ್ಯ ಲೋಕದಲ್ಲಿ ಸಕ್ರಿಯರಾಗಿದ್ದರು.
ಪ್ರಕಾಶ್ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮೃತರ ಅಂತಿಮ ದರ್ಶನ ಪಡೆದರು. ಹಿರಿಯ ಜೀವಿ ಪ್ರಕಾಶ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲೆಯಾದ್ಯಂತ ಫೆ. 9 ಮತ್ತು 10ರಂದು ಮೃತರ ಗೌರವಾರ್ಥ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ 1960ರ ದಶಕದಲ್ಲಿ ಸಾಮಾಜಿಕವಾಗಿ ಗುರುತಿಸಿಕೊಂಡ ಪ್ರಕಾಶ್, ಸಮಾಜವಾದಿಯಾಗಿದ್ದರು. 1963ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಸತತವಾಗಿ ಹೂವಿನಹಡಗಲಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಗೊಂಡಿದ್ದ ಪ್ರಕಾಶ್, ರಾಜಕೀಯ ಸ್ಥಿತ್ಯಂತರಗಳಿಂದಾಗಿ ಹರಪನಹಳ್ಳಿಯಿಂದ ಸ್ಪರ್ಧಿಸಬೇಕಾಯಿತು.