ಉದ್ಯಮಿಯಾಗಿಯೂ ಮಿಂಚಿದ್ದ ಎಂಪಿ ಪ್ರಕಾಶ್
ವಿಜಯನಗರ ಉಕ್ಕು ಕಾರ್ಖಾನೆಗಾಗಿ ಸರ್ಕಾರ ತೋರಣಗಲ್ಲು ಕೃಷಿಕರ ಭೂಮಿಯನ್ನು ಸ್ವಾಧೀನಕ್ಕೆ ಪಡೆದಾಗ ಹೆಚ್ಚಿನ ಪರಿಹಾರ ನೀಡಲು ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಹೋರಾಟ ನಡೆಸಿದ್ದರು. ಜಿಂದಾಲ್ ಸಂಸ್ಥೆಯು ಕೈಗಾರಿಕೆ ಸ್ಥಾಪಿಸಲು ಮುಂದಾದಾಗ ಸರ್ಕಾರದ ಮಟ್ಟದಲ್ಲಿನ ಎಲ್ಲಾ ಅನುಮತಿ'ಗಳನ್ನು ಕೊಡಿಸಿ ಸ್ಥಳೀಯರ ಉದ್ಯೋಗಕ್ಕಾಗಿ, ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸಿದರು.
ಕಮ್ಯುನಿಷ್ಟರು, ರೈತರು, ನಿರುದ್ಯೋಗಿಗಳು - ಸಂಘ - ಸಂಸ್ಥೆಗಳವರು ವಿಜನಗರದ ಉಕ್ಕು ನಮ್ಮ ಹಕ್ಕು' ಎಂದು ರಸ್ತೆಗಿಳಿದು ಘೋಷಣೆಗಳನ್ನು ಕೂಗಿದಾಗ ಪ್ರಕಾಶ್ ಅವರೂ ಕೂಡ ಸಣ್ಣ ದನಿಯಲ್ಲಿ ಹೌದೌದು ನಮ್ಮ ಹಕ್ಕು, ಉದ್ಯೋಗದ ಹಕ್ಕು' ಎನ್ನುತ್ತಲೇ ಮನವಿ ಸ್ವೀಕರಿಸುತ್ತಿದ್ದರು. ಕಂಪನಿಯ ಆಡಳಿತ ಮಂಡಲಿ ಕೂಡ ಎಂ.ಪಿ. ಪ್ರಕಾಶ್ ಅವರ ಜನಪರ ನಿಲುವುಗಳಿಗೆ ಬದ್ಧತೆ ತೋರಿ ಸ್ಥಳೀಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆಗೆ ಬದ್ಧತೆ ತೋರಿ ವಿಶೇಷ ಯೋಜನೆಗಳನ್ನೇ ರೂಪಿಸಿ ಜಾರಿ ಮಾಡಿತು.
ಓದಿ : ಅಜಾತಶತ್ರು, ಮುತ್ಸದ್ಧಿ ಎಂ.ಪಿ. ಪ್ರಕಾಶ್ ಇನ್ನಿಲ್ಲ
ಹೊಸಪೇಟೆ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ವಿವಿಧ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳ ಪ್ರಾರಂಭಕ್ಕೆ ಕಾರಣ ಆಗಿದ್ದರು. ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಜಿಲ್ಲೆಯ ಜನರೇ ಬಳಕೆ ಮಾಡಿಕೊಳ್ಳಲಿಕ್ಕಾಗಿ 7 ಸ್ಥಳಗಳಲ್ಲಿ ಸಮಾನಾಂತರ ಜಲಾಶಯಗಳ ನಿರ್ಮಾಣಕ್ಕೆ ಬದ್ಧರಾಗಿದ್ದರು. ಆದರೆ, ಜಲಾಶಯಗಳು ಈವರೆಗೂ ಪ್ರಾರಂಭ ಆಗಲಿಲ್ಲ ಎನ್ನುವುದು ಅವರಲ್ಲಿ ಬೇಸರ ಇತ್ತು.
ಕುಡತಿನಿ ಬಳಿಯ ಬಳ್ಳಾರಿ ಥರ್ಮಲ್ ಪ್ರಾಜೆಕ್ಟ್ ಅವರು ಜಿಲ್ಲೆಗೆ ತಂದ ಅತಿ ದೊಡ್ಡ ವಿದ್ಯುತ್ ಉತ್ಪಾದನಾ ಘಟಕ. ಸಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ಗದಗ - ಹೂವಿನಹಡಗಲಿಯ ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸಿ ಕೃಷಿ ನಡೆಸುವ ಕನಸು ಜಾರಿಯಲ್ಲಿದೆ. ಈ ನೀರನ್ನು ಬಳಕೆ ಮಾಡಿಕೊಂಡು ಗುಡಿ ಕೈಗಾರಿಕೆಗಳು ಪ್ರಾರಂಭ ಆಗಲಿ ಎನ್ನುವ ಆಶಯ ಇತ್ತು ಅವರಲ್ಲಿ.
ಓದಿ : 'ಪ್ರಕಾಶ'ವಿಲ್ಲದ ಹಡಗಲಿಯಲ್ಲಿ ಬರೀ ಕತ್ತಲು!
ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯಗಳ ವಿರುದ್ಧ ಸದಾ ತುಡಿಯುತ್ತಿದ್ದ ಪ್ರಕಾಶ್, ಈ ಕುರಿತಾದ ಚರ್ಚೆ, ಮಾತು, ಯೋಜನೆ, ಕನಸು - ವಿಚಾರಗಳಿಗೆ ಸದಾ ಮುಕ್ತವಾಗಿ ಸ್ಪಂದಿಸುತ್ತಿದ್ದರು. ನಿಗದಿತ ವ್ಯಕ್ತಿ, ಅಧಿಕಾರಿ, ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಹೊಂದಿರುತ್ತಿದ್ದರು.
ತೋರಣಗಲ್ಲುನ ಜಿಂದಾಲ್ ಘಟಕ, ಕೊಪ್ಪಳದ ಕಲ್ಯಾಣಿ ಸ್ಟೀಲ್ಸ್, ಕುಡತಿನಿಯ ಬಿಟಿಪಿಎಸ್, ಮರಿಯಮ್ಮನಹಳ್ಳಿ ಬಳಿಯ ಬಿಎಂಎಂಐನ ಸ್ಪಾಂಜ್ ಐರನ್ ಓರ್ ಘಟಕ ಪ್ರಾರಂಭಿಸಿ ಸಾವಿರಾರು ನಿರುದ್ಯೋಗಿಗಳ ಉದ್ಯೋಗದ ಕನಸಿಗೆ' ಸ್ವಾವಲಂಬನೆಯ ಮತ್ತೊಂದು ಕನಸು ಕಟ್ಟಿದ್ದರು.