ಪಂಕಜ್ ಜೈನ್ ಕೊಲೆ ವಿರುದ್ಧ ಒಗ್ಗಟ್ಟಾದ ಬಳ್ಳಾರಿ
ಬಳ್ಳಾರಿಯ ಬಡ್ಡಿ ವ್ಯಾಪಾರಿ, ಎಲೆಕ್ಟ್ರಿಕಲ್ ಅಂಗಡಿಯ ಪಂಕಜ್ ಜೈನ್ನನ್ನು ಫೆಬ್ರವರಿ 1ರ ರಾತ್ರಿ 9 ಗಂಟೆ ಸುಮಾರಿಗೆ ಅನಂತಪುರ ರಸ್ತೆಯಿಂದ ಅಪಹರಿಸಿದ್ದ ದುಷ್ಕರ್ಮಿಗಳು, ಕುಟುಂಬದ ಸದಸ್ಯರಿಂದ 7 ಲಕ್ಷ ರುಪಾಯಿ ಒತ್ತೆ ಹಣವನ್ನು ಫೆಬ್ರವರಿ 2ರಂದು ಪಡೆದಿದ್ದರು. ಆದರೂ, ಪಂಕಜ್ ಜೈನ್ನನ್ನು ಕೊಲೆ ಮಾಡಿದ್ದರು.
ಈ ಘಟನೆಯನ್ನು ಖಂಡಿಸಿ ಹಾಗೂ ಪೊಲೀಸ್ ವೈಫಲ್ಯವನ್ನು ಎತ್ತಿಹಿಡಿದು ಬಳ್ಳಾರಿಯ ತೇರುಬೀದಿಯ ಜೈನ್ ದೇವಸ್ಥಾನದಿಂದ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಾರಂಭವಾದ ಮೌನ ಪ್ರತಿಭಟನೆಯಲ್ಲಿ ಬಳ್ಳಾರಿ ನಗರದ ಸಗಟು ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ಸ್ವಯಂ ಪ್ರೇರಿತರಾಗಿ ವಹಿವಾಟು ಸ್ಥಗಿತಗೊಳಿಸಿ ಮೆರವಣಿಯಲ್ಲಿ ಪಾಲ್ಗೊಂಡರು. ಈ ಮೆರವಣಿಗೆಯಲ್ಲಿ ಜೈನ್ ಸಮುದಾಯದ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಇಡೀ ಮೆರವಣಿಗೆಯನ್ನು ಕಂಡ ಕೆಲ ವ್ಯಾಪಾರಿಗಳು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸ್ವಯಂ ಪ್ರೇರೇಪಿತರಾಗಿ ರಸ್ತೆಗಿಳಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರೇ ತಿಳಿಸಿದಂತೆ - ಪ್ರಕರಣ ಕುರಿತು ಐವರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆದಿದೆ. ಬಂಧಿತರು ಇನ್ನೂ ಕೆಲ ವ್ಯಾಪಾರಿಗಳನ್ನು, ವಾಣಿಜ್ಯೋದ್ಯಮಿಗಳನ್ನು ಹಣಕ್ಕಾಗಿ ಅಪಹರಿಸಿ, ಕೊಲೆ ಮಾಡುವ ಸಂಚು ನಡೆಸಿದ್ದರು' ಎನ್ನುವ ವಿಚಾರವನ್ನು ದಾಖಲಿಸಿ, ನಗರದ ವ್ಯಾಪಾರಿಗಳು, ವಾಣಿಜ್ಯೋದ್ಯಮಿಳಿಗೆ ರಕ್ಷಣೆ ನೀಡಿ, ಭದ್ರತೆ ಒದಗಿಸಿ ಎಂದು ಕೋರಿದ್ದಾರೆ.
ಮತ್ತು ಪಂಕಜ್ ಜೈನ್ರನ್ನು ರಕ್ಷಿಸುವಲ್ಲಿ ಪೊಲೀಸರು ಸಕಾಲಿಕವಾಗಿ ಯೋಜನೆ ರೂಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪಂಕಜ್ ಜೈನ್ ಕೊಲೆಗೆ ಪೊಲೀಸ್ ವೈಫಲ್ಯವೇ ಕಾರಣ. ಪೊಲೀಸರು ಮಾಹಿತಿ ಸಿಕ್ಕ ಕೂಡಲೇ, ದೂರು ನೀಡಿದ ಕೂಡಲೇ ತನಿಖೆ ನಡೆಸಲು ಅನಗತ್ಯವಾಗಿ ಸಮಯ ವ್ಯರ್ಥ ಮಾಡಿದರು ಎಂದು ದೂರಿದ್ದಾರೆ.
ಬೆಂಬಲ : ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಸಗಟು ವ್ಯಾಪಾರಿಗಳು ಮೌನ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಳ್ಳಾರಿ ನಗರದ ಇತಿಹಾಸದಲ್ಲೇ ಈ ರೀತಿಯ ಮೌನ ಪ್ರತಿಭಟನೆ ನಡೆದಿರಲಿಲ್ಲ ಎನ್ನುವುದು ಅನೇಕರ ಅಭಿಪ್ರಾಯ.