ಯಮನನ್ನು ಗೆದ್ದು ಬಂದ ಬಳ್ಳಾರಿಯ ಶಂಕರ
ಈ ಯುವಕನ ಹೆಸರು ವಿವೇಕಾನಂದ ಶಂಕರ. ನಂದಿ ಇಂಟರ್ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ನವೆಂಬರ್ 18ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ತಲೆ ಹಾಗೂ ಮೆದಳಿಗೆ ಗಂಭೀರವಾದ ಗಾಯಗಳಾಗಿ ಮೆದಳಿನಲ್ಲಿ ವಿಪರೀತ ರಕ್ತಸ್ರಾವ ಆಯಿತು. ರೋಗಿ ಬದುಕುಳಿಯುವುದು ದೊಡ್ಡ ಸವಾಲೇ ಆಗಿತ್ತು. ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಆತನ ತಂದೆ ಶಂಕರ ಮತ್ತು ತಾಯಿಗೆ, ವೈದ್ಯಕೀಯ ವೆಚ್ಚವನ್ನು ಭರಿಸುವುದೇ ಕಷ್ಟಕರವಾಗಿತ್ತು.
ಇನ್ನು ಸಾವು - ಬದುಕಿನ ಮಧ್ಯೆ ಕ್ಷಣಗಳನ್ನು ಕಳೆಯುತ್ತಿದ್ದ ಮಗನಿಗೆ ಬೆಂಗಳೂರಿನಲ್ಲಿ, ಹೈದರಾಬಾದ್ನಲ್ಲಿ ಅಥವಾ ಇನ್ನಾವುದೋ ದೂರದ ಊರಿನ ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಸಬೇಕು ಎನ್ನುವ ವಿಚಾರ. ಆದರೆ, ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೂ ಕೂಡ ಮಗ ಬದುಕಿ ಉಳಿಯುತ್ತಾನಾ? ಎನ್ನುವ ಪ್ರಶ್ನೆ ಇವರ ಎಲ್ಲಾ ಪ್ರಯತ್ನಕ್ಕೆ ನಿರಾಸೆ ಮೂಡಿಸಿತ್ತು. ಆಗ, ರೋಗಿಯ ಪೋಷಕರ ಗೊಂದಲಕ್ಕೆ ನೆರವಾದವರೇ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ನ ಮೆದುಳು ಹಾಗೂ ನರರೋಗಗಳ ಶಸ್ತ್ರಚಿಕಿತ್ಸಕ, ಸಹಾಯಕ ಪ್ರಾಧ್ಯಾಪಕ ಡಾ|| ಎಸ್. ವಿಶ್ವನಾಥ ಹಾಗು ತಂಡ.
ಗಾಯಾಳುವಿನ ಪೋಷಕರ ಮನವೋಲೈಸಿದ ಡಾ. ಎಸ್. ವಿಶ್ವನಾಥ್, ಸಾವು - ಬದುಕಿನ ಮಧ್ಯೆ ನರಳುತ್ತಿದ್ದ ಗಾಯಾಳುವಿನ ಮೆದಳಿನ ಒತ್ತಡವನ್ನು ಕಡಿಮೆ ಮಾಡಲಿಕ್ಕಾಗಿ ವೈದ್ಯರು ಮುಂದಾಗಿ, ಶೇ. 30ರಷ್ಟು ಭಾಗದ ತಲೆ ಬುರುಡೆಯನ್ನು ಹೊರತೆಗೆದು ಆತನ ಹೊಟ್ಟೆಯಲ್ಲಿ ಸೇರಿಸಿದರು. ಕ್ರಮೇಣ ಗಾಯಾಳು ಚೇತರಿಸಿಕೊಳ್ಳತೊಡಗಿದ. ಸತತ ನಾಲ್ಕು ತಾಸುಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಎರಡು ವಾರ ಕೃತಕ ಉಸಿರಾಟದಲ್ಲಿಟ್ಟರು.
ಗಾಯಾಳು ರಕ್ತಸ್ರಾವದಿಂದ ಚೇತರಿಸಿದ ನಂತರ, ಹೊಟ್ಟೆಯಲ್ಲಿ ಇರಿಸಲಾಗಿದ್ದ ತಲೆ ಬುರುಡೆಯನ್ನು ಫೆಬ್ರವರಿ 5ರಂದು ಹೊರತೆಗೆದು ಸತತ ಮೂರು ತಾಸು ಶಸ್ತ್ರಚಿಕಿತ್ಸೆ ನಡೆಸಿ ತಲೆಬುರುಡೆಯನ್ನು ಯಥಾ ಸ್ಥಿತಿಗೆ ಮರುಜೋಡಣೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.
ಸರಕಾರಿ ವೈದ್ಯರ ಸಾಧನೆ : ಇಂಥಹಾ ಪ್ರಕರಣಗಳಲ್ಲಿ ಶೇ 1ರಿಂದ 3ರಷ್ಟು ರೋಗಿಗಳು ಮಾತ್ರ ಬದುಕುಳಿಯುತ್ತಾರೆ. ಬಳ್ಳಾರಿಯ ವಿಮ್ಸ್ನಲ್ಲಿ ನಡೆದ ಮೊದಲ ಯತ್ನದಲ್ಲೇ ಗಾಯಾಳು ಬದುಕುಳಿದಿದ್ದು ಸ್ಥಳೀಯ ವೈದ್ಯರ ಸಾಧನೆ. ಈ ಶಸ್ತ್ರಚಿಕಿತ್ಸೆಯಲ್ಲಿ ಡಾ|| ಸತೀಶ, ಡಾ|| ಪ್ರತಿಭಾ, ಅರವಳಿಕೆ ತಜ್ಞ ಡಾ|| ಶ್ರೀನಿವಾಸುಲು ಮತ್ತು ತಂಡದವರು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲೂ ಕೂಡ ಸಾಧಕರಿದ್ದಾರೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.
ಈ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ 5ರಿಂದ 6 ಲಕ್ಷ ರುಪಾಯಿ ಖರ್ಚಾಗುತ್ತದೆ. ಗಾಯಾಳು ಬಿಪಿಎಲ್ ಕಾರ್ಡ್ದಾರ ಆಗಿರುವ ಹಿನ್ನಲೆಯಲ್ಲಿ ವಿಮ್ಸ್ - ಸರ್ಕಾರ ಈ ಶಸ್ತ್ರಚಿಕಿತ್ಸೆಯ ಎಲ್ಲಾ ಖರ್ಚನ್ನು ಭರಿಸಿದೆ. ಇನ್ನೂ ಒಂದೆರೆಡು ವಾರಗಳ ಕಾಲ ಗಾಯಾಳು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಾನೆ ಎನ್ನುತ್ತಾರೆ ವೈದ್ಯರು.
ವಿವೇಕಾನಂದನ ತಂದೆ ಶಂಕರ ಅವರು "ಮಗನಿಗೆ ಮರು ಹುಟ್ಟು ಬಂದಿದೆ. ಜ್ಞಾಪಕಶಕ್ತಿ, ಬುದ್ಧಿಶಕ್ತಿ, ಮಾತು, ನೆನಪಿನಶಕ್ತಿ, ದೈಹಿಕ ಚಲನವಲನಗಳು, ಕ್ರಿಯೆಗೆ ಸ್ಪಂದನೆ - ಪ್ರತಿಕ್ರಿಯೆ ಎಲ್ಲವೂ ವಿವೇಕಾನಂದನಲ್ಲಿ ಸಹಜವಾಗಿ ಮೂಡಿವೆ. ಮಗ ಯಮನನ್ನು ಗೆದ್ದು ಬಂದಿದ್ದಾನೆ. ನಮ್ಮ ಪಾಲಿಗೆ, ಮಗನ ಪಾಲಿಗೆ ವೈದ್ಯರೇ ಕಣ್ಣೆದುರಿನ ದೇವರು" ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಈ ಸಾಧನೆಗಾಗಿ ವಿಮ್ಸ್ ನಿರ್ದೇಶಕ ಡಾ|| ದೇವಾನಂದ, ಅಧೀಕ್ಷಕ ಡಾ|| ವಿದ್ಯಾಧರ ಕಿನ್ನಾಳ್ ಅವರು ಅಭಿನಂದಿಸಿ, ಹಿಂದುಳಿದ ಪ್ರದೇಶವಾದ ಬಳ್ಳಾರಿ ಜಿಲ್ಲೆಯಲ್ಲಿ ಇಂತಹ ಪ್ರಯೋಗಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ. ನೀವು ವೈದ್ಯರಿಗೆ ಶುಭ ಕೋರಿ ಡಾ. ಎಸ್. ವಿಶ್ವನಾಥ್ 09019163674.