ಮುಂಬೈ ದಾಳಿ ತೀರ್ಪು : ಕಸಬ್ ಭವಿಷ್ಯ ನಿರ್ಧಾರ
ಜನವರಿ 17ರಂದು ಕೊನೆಯ ಬಾರಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಫೆಬ್ರವರಿ 7ರವರೆಗೆ ತೀರ್ಪನ್ನು ಕಾಯ್ದಿರಿಸಿತ್ತು. ಹಾಗಾಗಿ ನಾಳೆ (ಸೋಮವಾರ) ತೀರ್ಪಿನ ದಿನಾಂಕವನ್ನು ಪ್ರಕಟಿಸುವ ಅಥವಾ ತೀರ್ಪನ್ನೇ ಪ್ರಕಟಿಸುವ ಸಾಧ್ಯತೆಗಳಿವೆ. ಈ ತೀರ್ಪು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನೂರಾರು ಮಂದಿಯ ಸಾವಿಗೆ ಕಾರಣವಾಗಿರುವ, ಮೂರು ದಿನಗಳ ಕಾಲ ಮುಂಬೈಯ ಆಯಕಟ್ಟಿನ ಸ್ಥಳಗಳನ್ನು ಒತ್ತೆಯಾಗಿಟ್ಟುಕೊಂಡಿದ್ದ ಪಾಕಿಸ್ತಾನದ ಹತ್ತು ಭಯೋತ್ಪಾದಕರಲ್ಲಿ ಜೀವಂತ ಸೆರೆ ಸಿಕ್ಕಿದ್ದು ಕಸಬ್ ಮಾತ್ರ.
ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರನ್ನು ಒಳಗೊಂಡ ಪೀಠವು ಪ್ರಕರಣಗಳ ವಿಚಾರಣೆ ನಡೆಸಿದೆ. ಸರಕಾರದ ಪರವಾಗಿ ವಕೀಲ ಉಜ್ವಲ್ ನಿಕ್ಕಂ ಹಾಗೂ ಆರೋಪಿ ಕಸಬ್ ಪರವಾಗಿ ಅಮೀನ್ ಸೋಲ್ಕರ್, ಸಂತೋಷ್ ದೇಶಪಾಂಡೆ ಮತ್ತು ಫರ್ಹಾನಾ ಶಾ ಹೈಕೋರ್ಟಿನಲ್ಲಿ ವಾದಿಸಿದ್ದರು
ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು, ಕಸಬ್ ತಪ್ಪಿತಸ್ಥ ಎಂದು ಹೇಳಿದ್ದಲ್ಲದೆ, ಮರಣ ದಂಡನೆ ಶಿಕ್ಷೆಯನ್ನು ಪ್ರಕಟಿಸಿತ್ತು. ಇದರ ವಿರುದ್ಧ ಬಾಂಬೆ ಹೈಕೋರ್ಟಿನಲ್ಲಿ ಕಸಬ್ ಮೇಲ್ಮನವಿ ಸಲ್ಲಿಸಿದ್ದ. ಅತ್ತ ಮಹಾರಾಷ್ಟ್ರ ಸರಕಾರವು ಗಲ್ಲು ಶಿಕ್ಷೆ ಖಚಿತಪಡಿಸಲು ಮನವಿ ಮಾಡಿತ್ತು. ಈ ಎರಡೂ ತೀರ್ಪು ಒಟ್ಟಿಗೆ ಹೊರ ಬೀಳುವ ನಿರೀಕ್ಷೆಗಳಿವೆ.