ಕೃಷಿಗೆ ಪ್ರತ್ಯೇಕ ಬಜೆಟ್ ಯಡ್ಡಿ ಗಿಮಿಕ್
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಆದಾಯ ಆಧರಿಸಿ, ರೈತರೊಂದಿಗೆ ಚರ್ಚಿಸಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಬಜೆಟ್ ಮಂಡಿಸಬೇಕು. ಬದಲಾಗಿ ಓಟ್ ಪಾಲಿಟಿಕ್ಸ್ಗಾಗಿ ಕೃಷಿ ಬಜೆಟ್ ಮಂಡಿಸುವ ವಿಚಾರ ವ್ಯಕ್ತಪಡಿಸಿರುವುದು ಅಸಂಬದ್ಧ ವಿಚಾರ ಎಂದರು.
ಸರ್ಕಾರಕ್ಕೆ ಅಥವಾ ಬಿಜೆಪಿಗೆ ಅಥವಾ ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ, ಕಳಕಳಿ, ಆಸಕ್ತಿ ಇದ್ದಲ್ಲಿ ಕೃಷಿ ಬಜೆಟ್ ಮಂಡಿಸಲಿ. ಆದರೆ, ಈ ರೀತಿಯ ವಿಭಿನ್ನ ಬಜೆಟ್ ಮಂಡನೆಗೆ ಪೂರ್ವದಲ್ಲಿ ಕೃಷಿಕರು, ರೈತಪರ ಸಂಘಟನೆಗಳು, ರೈತಪರ ಕಾಳಜಿ ಉಳ್ಳ ಚಿಂತಕರು, ರೈತ ಪರ ಹೋರಾಟಗಾರರು ಮತ್ತು ತಜ್ಞರ ಜೊತೆಯಲ್ಲಿ ಚರ್ಚೆ ನಡೆಸಿ, ಸೂಕ್ತ ರೀತಿಯಲ್ಲಿ ಬಜೆಟ್ ಮಂಡಿಸಬೇಕು ಎಂದರು.
ಆದರೆ, ಸರ್ಕಾರಕ್ಕೆ, ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರೈತರನ್ನು ವಂಚಿಸುವ, ರೈತರ ಹೆಸರಲ್ಲಿ ರಾಜಕೀಮ ಮಾಡುವ, ರೈತರ ಹೆಸರಲ್ಲಿ ರಾಜಕೀಯ ನಾಟಕಗಳನ್ನು ಆಡಿಸುವ ಅಭ್ಯಾಸ ಇದೆ. ಈ ಹಿನ್ನಲೆಯಲ್ಲಿ ಸರ್ಕಾರ ರೈತರನ್ನು ಮತ್ತೊಮ್ಮೆ ವಂಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಕೃಷಿ ಪಾರ್ಕ್ ನಿರ್ಮಿಸಿ: ರೈತರ ಬಗ್ಗೆ ಕಾಳಜಿ ಇದ್ದು ಕೃಷಿ ಬಜೆಟ್ ಮಂಡಿಸುವುದಾದರೆ ಕೃಷಿ ಆದಾಯವನ್ನು ವಿಭಜನೆ ಮಾಡಬೇಕು. ಹವಾಮಾನ ಆಧಾರದಲ್ಲಿ ರಚಿಸಲಾಗಿರುವ ಕೃಷಿ ವಲಯಗಳನ್ನು ಕೃಷಿ ಪಾರ್ಕ್ಗಳನ್ನಾಗಿ ಪರಿವರ್ತಿಸಬೇಕು. ಈ ಪಾರ್ಕ್ಗಳಲ್ಲಿ ಸಂಶೋಧನೆ, ಅಭಿವೃದ್ಧಿ ವಿಭಾಗಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಸಾವಯವ ಕೃಷಿ, ರಾಸಾಯನಿಕ ಬಳಕೆ ಕೃಷಿಯಲ್ಲಿ ಯಾವುದು ಇರಬೇಕು ಎಂಬುದು ಬಜೆಟ್ನಲ್ಲಿ ಪ್ರಸ್ತಾಪವಾಗಬೇಕು. ಕೃಷಿ ಯಂತ್ರೋಪಕರಣಗಳು ರೈತರಿಗೆ ಅಗ್ಗದ ದರದಲ್ಲಿ ಲಭ್ಯವಾಗುವಂತೆ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.