ಚಿ.ಮೂ.ಗೆ ಡಾಕ್ಟರೇಟ್: ಶರಣು ಎಂದ ಭಾರದ್ವಾಜ್
ಚಿದಾನಂದ ಮೂರ್ತಿ ಕೋಮುವಾದಿ ಎಂಬ ತೀರ್ಮಾನಕ್ಕೆ ಬಂದಿದ್ದ ರಾಜ್ಯಪಾಲ ಭಾರದ್ವಾಜ್ ಅವರು ಕನ್ನಡ ಸಾರಸ್ವತ ಲೋಕದ ಹಿರಿಯ ಜೀವಿಗೆ ಡಾಕ್ಟರೇಟ್ ನೀಡಲು ನಿರಾಕರಿಸಿದ್ದರು. ಇತ್ತ ರಾಜಧಾನಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿಯೇ ಘನತೆವೆತ್ತ ರಾಜ್ಯಪಾಲರು ಇಂತಹ ಅವಿವೇಕದ ನಿರ್ಧಾರ ಕೈಗೊಂಡಿದ್ದು ಎಲ್ಲ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿತ್ತು. ಸಮ್ಮೇಳನಾಧ್ಯಕ್ಷ ಜಿವಿ ಸೇರಿದಂತೆ ಎಲ್ಲರೂ ಒಕ್ಕೊರಲಿಂದ ಚಿ.ಮೂ. ಗೌರವ ಡಾಕ್ಟರೇಟ್ಗೆ ಅರ್ಹರು ಎಂದಿದ್ದರು.
ಎಚ್ಚೆತ್ತ ರಾಜ್ಯಪಾಲ ಭಾರದ್ವಾಜ್ ಅವರು ಅನ್ಯ ಮಾರ್ಗ ಕಾಣದೆ ನಾಡು ಕಂಡ ಅಪರೂಪದ ಇತಿಹಾಸ ತಜ್ಞ ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ದಯಪಾಲಿಸಲು ಸಮ್ಮತಿಸಿದ್ದಾರೆ.
ಸಂತೋಷದಿಂದ ಸ್ವೀಕರಿಸುವೆ: ಚಿಮೂ 'ರಾಜ್ಯಪಾಲರು ಸಿಂಡಿಕೇಟ್ ನಿರ್ಣಯವನ್ನು ತಡೆಹಿಡಿದಿದ್ದು ಸರಿಯಲ್ಲ. ಅದರಿಂದ ತುಂಬಾ ಬೇಸರವಾಗಿತ್ತು. ಆದರೆ ಈಗ ಎಲ್ಲ ಸರಿ ಹೋಗಿದೆ. ಡಾಕ್ಟರೇಟ್ ಅನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ' ಎಂದು ಚಿ.ಮೂ. ಪ್ರತಿಕ್ರಿಯಿಸಿದ್ದಾರೆ.