ಒಂದು ಫೋನ್ ಕರೆಗೆ ದ.ಕ ಕ್ರೈಂ ಸುದ್ದಿ ಲಭ್ಯ
ಈ ಕಂಟ್ರೋಲ್ ರೂಮನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು ಉದ್ಘಾಟಿಸಿದ ನಂತರ ಜಿಲ್ಲಾ ಎಸ್.ಪಿ. ಸುಬ್ರಮಣ್ಯೇಶ್ವರ್ ರಾವ್ ಕಂಟ್ರೋಲ್ ರೂಮಿನ ಬಗ್ಗೆ ಮಾಹಿತಿ ನೀಡಿದರು. ಈ ಯೋಜನೆ ದ.ಕ. ಜಿಲ್ಲೆಯಲ್ಲೇ ಪ್ರಥಮವಾಗಿದೆ. ಇದುವರೆಗೆ ಯಾವುದೇ ಘಟನೆಗಳು ನಡೆದ ಹಲವಾರು ಗಂಟೆಗಳ ಬಳಿಕ ಸಾರ್ವ ಜನಿಕರಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದಕ್ಕೆ ತಕ್ಷಣವೇ ಮಾಹಿತಿ ನೀಡಲಾಗುತ್ತದೆ ಎಂದರು. ದಕ್ಷಿಣ ಕನ್ನಡ ಪೊಲೀಸರು ಪ್ರತ್ಯೇಕ ವೆಬ್ ಸೈಟ್ ಕೂಡಾ ಹೊಂದಿದ್ದು, ಅದರಲ್ಲೂ ಪ್ರತಿನಿತ್ಯ ದಾಖಲಾದ ದೂರಿನ ವಿವರಗಳು ಲಭ್ಯವಿರುತ್ತದೆ.
ಅಲ್ಲದೆ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನೂ ಕಂಟ್ರೋಲ್ ರೂಮಿನಲ್ಲಿ ನೀಡಲಾಗುತ್ತಿದ್ದು ಈ ಕೆಲಸವನ್ನು ಎಸ್.ಐ.ಯವರು ನಿರ್ವಹಿಸಲಿದ್ದಾರೆ. ಇದಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಂಟ್ರೋಲ್ ರೂಮಿನ ಸಂಖ್ಯೆ (0824)242 404 ಮತ್ತು ಮೊಬೈಲ್ ಸಂಖ್ಯೆ 94808 05300 ಆಗಿರುತ್ತದೆ ಈ ಕೇಂದ್ರ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದರು.
ಅಮಿತ್ ಸಿಂಗ್ ಪ್ರಕರಣ : ಇತ್ತೀಚೆಗೆ ಬಂಟ್ವಾಳ ಠಾಣೆಯಲ್ಲಿ ಎಎಸ್ಪಿ ಅಮಿತ್ ಸಿಂಗ್ ಪ್ರಕರಣವನ್ನು ಪ್ರಸ್ತಾಪಿಸಿದ ಎಸ್.ಪಿ. ಸುಬ್ರಹ್ಮಣ್ಯೇಶ್ವರ್ ರಾವ್ ಪ್ರಕರಣವೊಂದಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಅವರ ವಿಚಾರಣೆ ಮುಗಿಯುವ ಮೊದಲೇ ಬಿ.ಜೆ.ಪಿ. ಮುಖಂಡರೋರ್ವರು ಠಾಣೆಗೆ ಬಂದು ನೇರವಾಗಿ ಆರೋಪಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆರೋಪಿ ರೌಡಿ ಶೀಟರ್ ಆಗಿದ್ದು, ವಿಚಾರಣೆ ಮುಗಿಯದೆ ಹೊರಗಿನವರೊಂದಿಗೆ ಮಾತನಾಡಲು ಠಾಣಾಧಿಕಾರಿ ಅನುಮತಿ ನೀಡಿದ್ದರೆ ಅದು ಪೊಲೀಸ್ ವೈಫಲ್ಯವೇ ಸರಿ.
ಬಂಟ್ವಾಳ ಪೊಲೀಸರೇ ಸರಿಯಾಗಿ ವಿಚಾರಣೆ ನಡೆಸಿದ್ದರೆ ಪ್ರಕರಣದಲ್ಲಿ ಎಎಸ್ಪಿ ಅವರು ಮಧ್ಯೆ ಪ್ರವೇಶಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಎಎಸ್ಪಿ ವಿರುದ್ಧ ಪ್ರತಿಭಟನೆ ನಡೆದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಅಗತ್ಯವಾದ ಕಾನೂನು ಕ್ರಮ ಜಾರಿಗೊಳಿಸಬಹುದು ಎಂದರು.