ನಿಂತಿದ್ದ ಲಾರಿಗೆ ವ್ಯಾನ್ ಡಿಕ್ಕಿ: ದಂಪತಿಗಳು ಸಾವು
ಸೋಮವಾರಪೇಟೆ ಬಸವೇಶ್ವರ ರಸ್ತೆಯ ನಿವಾಸಿ, ಖಾಸಗಿ ಬಸ್ವೊಂದರ ಮಾಲೀಕ ಮಹೇಶ್ ಹಾಗೂ ಪತ್ನಿ ಶೀಲಾ ಎಂಬುವರೇ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದು, ಗಾಯಗೊಂಡ ಮನಶ್ರೀ ಹಾಗೂ ಪುನಿತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಮಹೇಶ್ ಹಾಗೂ ಶೀಲಾ ದಂಪತಿಗಳು ತಮ್ಮ ಹಿರಿಯ ಪುತ್ರಿ ಪೂನಂಗೆ ವಿವಾಹ ನಿಶ್ಚಯವಾಗಿರುವ ಹಿನ್ನಲೆಯಲ್ಲಿ ಆಕೆಯ ವಿವಾಹಕ್ಕೆ ಬೇಕಾದ ಬಟ್ಟೆ ಇನ್ನಿತರ ಪದಾರ್ಥಗಳನ್ನು ಖರೀದಿಸಲೆಂದು ನಿನ್ನೆ ತಮ್ಮ ಮಾರುತಿ ಓಮ್ನಿ(ಕೆಎ 12ಎನ್ 9076)ಯಲ್ಲಿ ಪುತ್ರ ಪುನೀತ್ ಹಾಗೂ ಪುತ್ರಿ ಮನಶ್ರೀಯೊಂದಿಗೆ ಬೆಂಗಳೂರಿಗೆ ತೆರಳಿದ್ದು, ಅಲ್ಲಿ ತಮಗೆ ಬೇಕಾದ ಬಟ್ಟೆ ಮತ್ತಿತರ ಪದಾರ್ಥಗಳನ್ನು ಖರೀದಿಸಿ ಮುಂಜಾನೆ ಮನೆಗೆ ಹಿಂತಿರುಗುತ್ತಿದ್ದರು.
ಈ ಸಂದರ್ಭ ಕುಶಾಲನಗರದ ಕೊಪ್ಪದ ಬಳಿ ದಟ್ಟ ಮಂಜು ಕವಿದಿದ್ದ ಹಿನ್ನಲೆಯಲ್ಲಿ ರಸ್ತೆ ಸರಿಯಾಗಿ ಕಾಣದೆ ಅಲ್ಲಿನ ಗ್ಯಾರೇಜ್ ಬಳಿ ನಿಂತಿದ್ದ ಲಾರಿಗೆ ಮಹೇಶ್ ಅವರು ಚಾಲಿಸುತ್ತಿದ್ದ ಮಾರುತಿ ಓಮ್ನಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹೇಶ್ ಹಾಗೂ ಶೀಲಾ ಅವರುಗಳು ಗಂಭೀರ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಕುಶಾಲನಗರ ಆಸ್ಪತ್ರೆಗೆ ಅವರನ್ನು ಕರೆದೊಯ್ದಿದ್ದಾರೆ.
ಆದರೆ ಆಸ್ಪತ್ರೆ ತಲುಪುವ ಮುನ್ನವೇ ಮಹೇಶ್ ಮೃತಪಟ್ಟಿದ್ದಾರೆ. ಶೀಲಾ ಅವರಿಗೆ ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಕರೆದೊಯ್ಯಲಾಯಿತಾದರೂ ಅವರು ಕೂಡ ಮಾರ್ಗದ ನಡುವೆ ಸಾವನ್ನಪ್ಪಿದ್ದಾರೆ.
ಗಾಯಗೊಂಡ ಮಕ್ಕಳಾದ ಮನಶ್ರೀ ಹಾಗೂ ಪುನಿತ್ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವವನ್ನು ನೀಡಲಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯ ಎಸ್ಐ ಎಂ.ಸಿ.ನಾಗೇಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.