ಚಿಮೂಗೆ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲ
ಬೆಂಗಳೂರು ವಿಶ್ವವಿದ್ಯಾಲಯದ 46ನೇ ಘಟಿಕೋತ್ಸವದ ಅಂಗವಾಗಿ ಖ್ಯಾತ ಕವಿ ನಾಡೋಜ ಕೆ ಎಸ್ ನಿಸಾರ್ ಅಹ್ಮದ್, ಡಾ. ಚಿದಾನಂದಮೂರ್ತಿ ಹಾಗೂ ಕಲಾವಿದ ಬಿಕೆಎಸ್ ವರ್ಮಾ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಲಾಗಿತ್ತು. ಈ ಸಂಬಂಧದ ಪ್ರಸ್ತಾವನೆಯನ್ನು ಕುಲಾಧಿಪತಿಯೂ ಆದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅನುಮೋದಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಚಿದಾನಂದಮೂರ್ತಿ ಅವರ ಹೆಸರನ್ನು ಕೈಬಿಡಲಾಯಿತು.
ಈ ಸಂಬಂಧ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರ ಕಚೇರಿಯಿಂದ ಸಂದೇಶ ರವಾನೆಯಾಗಿ ನಿಸಾರ್ ಅಹ್ಮದ್ ಮತ್ತು ಬಿಕೆಎಸ್ ವರ್ಮಾ ಅವರಿಗೆ ಮಾತ್ರ ಡಾಕ್ಟರೇಟ್ ನೀಡಲು ಸೂಚನೆ ನೀಡಲಾಯಿತು. ಚಿದಾನಂದಮೂರ್ತಿ ಅವರು ಸಂಘ ಪರಿವಾರದ ಹಿನ್ನೆಲೆಯವರಾಗಿದ್ದು, ಹಿಂದೂ ಧರ್ಮ ಪರವಾದ ವಿಚಾರಗಳ ಪ್ರತಿಪಾದನೆಗೆ ಸೀಮಿತರಾಗಿದ್ದಾರೆ. ಹೀಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದು ಸರಿಯಲ್ಲ ಎಂದು ರಾಜ್ಯಪಾಲರ ಮೇಲೆ ತೀವ್ರ ಒತ್ತಡ ಬಂದಿದ್ದರಿಂದ ಈ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.