ಧ್ಯಾನಕ್ಕೆ ಅಗೋಚರ ಶಕ್ತಿ ಇದೆ : ರವಿಶಂಕರ ಗುರೂಜಿ
ಧ್ಯಾನದ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸ್ಥಿರತೆ ಹಾಗೂ ಏಕಾಗ್ರತೆಗಳು ಮೂಡುತ್ತವೆ. ದೈನಂದಿನ ಬದುಕಿನಲ್ಲಿ ಚೈತನ್ಯ ಮೂಡುತ್ತದೆ. ಉಲ್ಲಾಸ ನಿಮ್ಮ ಹೃದಯದಲ್ಲಿ ಸ್ಥಾನ ಪಡೆಯುತ್ತದೆ. ಸದಾ ಕಾಲ ನಗು ನಿಮ್ಮದಾಗುತ್ತದೆ ಎಂದರು. ಪ್ರತಿಯೊಬ್ಬರ ಬದುಕಿನಲ್ಲೂ ಧ್ಯಾನ ಬದಲಾವಣೆ ಮೂಡಿಸಿದೆ. ಧ್ಯಾನ ಶಕ್ತಿ ನೀಡಿದೆ. ಮಾರ್ಗ ಸೂಚಿಸಿದೆ. ವೃತ್ತಿಯಲ್ಲಿನ ಏರಿಳಿತಗಳನ್ನು, ಸವಾಲುಗಳನ್ನು ಸುಲಭವಾಗಿ ಎದುರಿಸುವ ತಾಳ್ಮೆಯನ್ನು, ನಿಧಾನತೆಯನ್ನು ನೀಡಿದೆ. ಧ್ಯಾನಕ್ಕೆ ಅಗಾಧವಾದ, ಅಗೋಚರ ಶಕ್ತಿ ಇದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಏಕಾಗ್ರತೆಗಾಗಿ, ಆತ್ಮಸ್ಥೈರ್ಯಕ್ಕಾಗಿ ಧ್ಯಾನವನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿಯಲ್ಲಿ ವೃತ್ತಿಯಲ್ಲಿ ಏಕಾಗ್ರತೆ ಹಾಗೂ ಆತ್ಮಸ್ಥೈರ್ಯವನ್ನು ಗಳಿಸಲಿಕ್ಕಾಗಿ ವ್ಯಾಪಾರಿಗಳು ಧ್ಯಾನವನ್ನು ಕಲಿಯಬೇಕು. ಕಾರಣ ಪ್ರತಿಯೊಬ್ಬ ವ್ಯಾಪಾರಿ ಬದುಕಿನ ಕೆಲ ಕಾಲ ಧ್ಯಾನ, ಸಂಗೀತ ಮತ್ತು ಜ್ಞಾನಾರ್ಜನೆಗೆ ಸಮಯವನ್ನು ಮೀಸಲು ಮಾಡಬೇಕು ಎಂದರು.
ಮನುಷ್ಯರಲ್ಲಿ ಆಧ್ಯಾತ್ಮಿಕ ಅರಿವಿನ ಕೊರತೆ ಉಂಟಾಗಿರುವ ಕಾರಣ ಸಮಾಜದಲ್ಲಿ ಅಶಾಂತಿ, ಅಜ್ಞಾನ, ಮೌಢ್ಯತೆ, ಅಂಧಕಾರ ದಿನೇ ದಿನೇ ಹೆಚ್ಚುತ್ತಿವೆ. ವ್ಯಕ್ತಿ ವ್ಯಕ್ತಿ ಮಧ್ಯೆ ವಿರಸ, ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ದ್ರೋಹ ಚಿಂತನೆ ಕ್ರಮೇಣ ಆವರಿಸಿದೆ. ಭ್ರಷ್ಟಾಚಾರ ಸಮಾಜದಲ್ಲಿ ತಾಂಡವಾಡುತ್ತಿದೆ ಎಂದು ವಿಶ್ಲೇಷಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಹಣ, ವ್ಯಾಪಾರ - ವಹಿವಾಟುಗಳು ದಿನೇ ದಿನೇ ಹೆಚ್ಚುತ್ತಿವೆ. ಇಲ್ಲಿಯ ಶ್ರೀಮಂತಿಕೆ ರಾಜ್ಯ - ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದೆ. ವ್ಯಾಪಾರದಲ್ಲಿ ಪ್ರತಿ ಕ್ಷಣವೂ ಸವಾಲುಗಳು ಎದುರಾಗುತ್ತಿವೆ. ಇಂಥಹಾ ಪ್ರಸಂಗದಲ್ಲಿ ಆಧ್ಯಾತ್ಮಿಕ ಒಲವು, ಧ್ಯಾನದತ್ತ ಆಸಕ್ತಿ ತೋರುವುದು ಅನುಕೂಲಕರ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಜೆ. ಸತ್ಯನಾರಾಯಣ, ಗೌರವ ಕಾರ್ಯದರ್ಶಿ ಎ. ಚನ್ನಪ್ಪ, ಉಪಾಧ್ಯಕ್ಷ ಕೆ.ಸಿ. ವನ್ನೂರುಸ್ವಾಮಿ, ವಿ.ಎನ್. ಸುರೇಶ್ ಹಾಗೂ ಇನ್ನಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಅನುಶಾ ಕಾಡ್ಲೂರು ಪ್ರಾರ್ಥನೆ ಸಲ್ಲಿಸಿದರು. ಬಸವರಾಜ್ ಸ್ವಾಗತಿಸಿದರು.