ಸುಷ್ಮಾ ಎಸ್ ಎಂ ಕೃಷ್ಣ ಭೇಟಿ, ಟ್ವಿಟರ್ ಅಪ್ಡೇಟ್
ಶ್ರೀಲಂಕಾ ಬೆಸ್ತರ ಕುರಿತು ಕೃಷ್ಣ ಅವರನ್ನು ಭೇಟಿಯಾಗುವ ಇರಾದೆಯನ್ನು ಸುಷ್ಮಾ ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅವರು ಈ ಭೇಟಿ ನೀಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಕೊಲಂಬೊದಲ್ಲಿ ಶ್ರೀಲಂಕಾ ಅಧ್ಯಕ್ಷರನ್ನು ಭೇಟಿ ಮಾಡಿ ತಮಿಳು ಬೆಸ್ತರ ಹತ್ಯೆಯ ಬಗ್ಗೆ ಭಾರತ ಹೊಂದಿರುವ ಕಳವಳವನ್ನು ವಿವರಿಸಿದ್ದಾರೆ. ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ರಚಿಸಲಾಗಿರುವ ಜಂಟಿ ಕ್ರಿಯಾ ತಂಡ ಹೆಚ್ಚು ಸಕ್ರಿಯವಾಗಿರಬೇಕೆಂದು ಎಂದು ಶ್ರೀಲಂಕಾ ಅಧ್ಯಕ್ಷರಿಗೆ ಹೇಳಲಾಗಿದೆ ಎಂದು ಸಚಿವರು ತನಗೆ ತಿಳಿಸಿದ್ದಾರೆಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ಪಟ್ಟಿ ಬಿಗಿದಿರುವ ವಿಚಾರವನ್ನು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಈಜಿಪ್ಟ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸು ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷ್ಣ ಸುಷ್ಮಾ ಅವರಿಗೆ ವಿವರಿಸಿದ್ದಾರೆ. ಸುಷ್ಮಾ ಹೊಂದಿದ್ದ ಗಂಭೀರ ಕಳವಳವಕ್ಕೆ ಪ್ರತಿಸ್ಪಂದಿಸಿ ವಿಪಕ್ಷ ನಾಯಕಿಯನ್ನು ಭೇಟಿಯಾಗುವಷ್ಟು ಸೌಜನ್ಯವನ್ನು ಕೃಷ್ಣ ತೋರಿಸಿದರೆಂದು ಭೇಟಿಯ ಬಳಿಕ ಬಿಜೆಪಿ ಹೇಳಿದೆ.