ಮತಾಂತರ ನಿಷೇಧ ಕಾಯ್ದೆಗೆ ಚಿದಾನಂದ ಮೂರ್ತಿ ಪಟ್ಟು
ರಾಜ್ಯದಲ್ಲಿ ನಡೆದಿರುವ ಕ್ರೈಸ್ತ ಧರ್ಮೀಯರು ಮತ್ತು ಚರ್ಚ್ ಮೇಲೆ ನಡೆದಿರುವ ದಾಳಿಯ ತನಿಖೆ ನಡೆಸಿ ವರದಿಯನ್ನು ನ್ಯಾಯಮೂರ್ತಿ ಸೋಮಶೇಖರ ಅವರ ಆಯೋಗ ನೀಡಿದ ನಂತರ ಪ್ರತಿಕ್ರಿಯಿಸುವ ಚಿದಾನಂದ ಮೂರ್ತಿಯವರು ಬಲವಂತದ ಮತಾಂತರಕ್ಕೆ ಅದನ್ನು ನಿಷೇಧಿಸಿ ಕಾನೂನು ರೂಪಿಸುವುದೊಂದೇ ಮದ್ದು ಎಂದು ಹೇಳಿದ್ದಾರೆ.
ಸೋಮಶೇಖರ ಅವರ ಶಿಫಾರಸಿನಂತೆ ಮತಾಂತರ ಕಾನೂನು ರೂಪಿಸುವ ಅಗತ್ಯವಿದೆ. ಗುಜರಾತ್, ಮಧ್ಯಪ್ರದೇಶ ಮತ್ತು ಓರಿಸ್ಸಾ ರಾಜ್ಯಗಳು ಈಗಾಗಲೆ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿವೆ. ರಾಜ್ಯದಲ್ಲಿ ಅವ್ಯಾಹತವಾಗಿ ಮತಾಂತರ ಸಂಭವಿಸುತ್ತಿರುವುದರಿಂದ ಇಲ್ಲಿ ಕೂಡ ಕಾನೂನು ರೂಪಿಸಿ ಜಾರಿ ತರುವ ಅಗತ್ಯವಿದೆ ಎಂದು ಪತ್ರಕರ್ತರೊಂದಿಗೆ ಬುಧವಾರ ತಿಳಿಸಿದರು.
ಕೆಲ ಕ್ರೈಸ್ತ ಧರ್ಮೀಯ ಮೂಲಭೂತವಾದಿಗಳು ಉತ್ತರ ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಹಿಂದೂ ಮತ್ತು ಲಿಂಗಾಯತರನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸಾಮಾಜಿಕ ಮತ್ತು ಆರ್ಥಿಕ ದೌರ್ಬಲ್ಯವನ್ನು ಲಾಭ ಪಡೆಯುತ್ತಿರುವ ಕೆಲ ಮಷಿನರಿಗಳು ಹಿಂದೂ ವಿರೋಧಿ ಕಾರ್ಯದಲ್ಲಿ ತೊಡಗಿವೆ ಎಂದು ಮೂರ್ತಿಗಳು ನುಡಿದರು.
ಇದು ಭಾರತದಲ್ಲಿರುವ ಬಹುಸಂಸ್ಕೃತಿಗೆ ತದ್ವಿರುದ್ಧವಾದದ್ದು. ಮತಾಂತರ ಕಾಯ್ದೆ ಜಾರಿಗೆ ತರುವುದರಿಂದ ಮಾತ್ರ ಇಂಥ ಶಕ್ತಿಗಳನ್ನು ಮಟ್ಟಹಾಕಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ನ್ಯಾ.ಸೋಮಶೇಖರ ಅವರು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಬಿಜೆಪಿ ಮತ್ತು ಸಂಘವನ್ನು ದೋಷಮುಕ್ತರನ್ನಾಗಿ ಮಾಡಿದ್ದಾರೆ. ಹಿಂದೂಗಳಿಗೆ ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ಹತ್ತಿಕ್ಕಲು ಕಾನೂನು ತರುವುದೊಂದೇ ಮಾರ್ಗ ಎಂದು ಕಾನೂನು ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಕೂಡ ಅಭಿಪ್ರಾಯಪಟ್ಟಿದ್ದರು.