ವಾಮಾಚಾರ : ಸಿಎಂ ವೈಯಕ್ತಿಕ ಅಭಿಪ್ರಾಯ
ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸೌಧದ ಬಳಿ ಕೆಲವರು ಅರಿಶಿಣ-ಕುಂಕುಮ ಹಾಕಿದ್ದರು. ಇದರಿಂದಾಗಿ, ವಾಮಾಚಾರ ನಡೆದಿದೆ ಎಂದು ಮುಖ್ಯಮಂತ್ರಿಗಳಿಗೆ ಅನಿಸಿರಬಹುದು. ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದನ್ನು ನಾನು ಮಾಧ್ಯಮಗಳಲ್ಲಷ್ಟೇ ಗಮನಿಸಿದ್ದೇನೆ. ಅವರು ತಮ್ಮಲ್ಲಿರುವ ಆತಂಕವನ್ನು ಹೊರಹಾಕಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಮಂಗಳವಾರ ಬಿಜೆಪಿಯ ಕಾರ್ಯಾಲಯದಲ್ಲಿ ಈಶ್ವರಪ್ಪ ಹೇಳಿದರು.
ಸರಕಾರ ಬೀಳಿಸುವ ಹುನ್ನಾರ : ವಿರೋಧ ಪಕ್ಷಗಳು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ರವರನ್ನು ವಿರೋಧಪಕ್ಷದ ನಾಯಕನನ್ನಾಗಿ ಬಳಸಿಕೊಂಡು ಸರ್ಕಾರವನ್ನು ಬೀಳಿಸುವ ಕಾರ್ಯಕ್ಕೆ ಮುಂದಾಗಿವೆ. ವಿರೋಧಪಕ್ಷಗಳಿಗೆ ಹೇಗೆ ಕೆಲಸ ಮಾಡಬೇಕು ಎಂಬುದೇ ಗೊತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯವನ್ನು ಆಳಿಗೊತ್ತಿದೆಯೇ ಹೊರತು ವಿರೋಧಪಕ್ಷದಲ್ಲಿ ಕುಳಿತು ಕೆಲಸಮಾಡಿ ಗೊತ್ತಿಲ್ಲ. ಹೀಗಾಗಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಭಾರದ್ವಾಜ್ರವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಬಳಸಿಕೊಂಡು ಸರ್ಕಾರವನ್ನೇ ಬೀಳಿಸಲು ಹೊರಟಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಒಳಒಪ್ಪಂದ : ಜೆಡಿಎಸ್ ಹಾಗೂ ಕಾಂಗ್ರೆಸ್ನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಬಿಜೆಪಿಗೆ ಅಧಿಕಾರ ನಡೆಸಲು ಬಹುಮತ ನೀಡಿದ್ದಾರೆ. ಆದರೆ, ಸೋನಿಯಾ ಗಾಂಧಿಯವರಿಂದ ಶಹಬ್ಬಾಸ್ಗಿರಿ ಪಡೆಯಬೇಕು ಎಂಬ ಆಸೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಒಪ್ಪಂದದ ಮೂಲಕ ಬಿಜೆಪಿ ಶಾಸಕರನ್ನು ಖರೀದಿಸಲು ಹೊರಟಿತ್ತು. ಅವರಿಗೆ ಕೈಜೋಡಿಸಿದ ಬಿಜೆಪಿಯ 16 ಜನ ಶಾಸಕರು ಏನಾದರು? ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಜೆಡಿಎಸ್ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಗಾದರೂ ಮಾಡಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಪಣತೊಟ್ಟಿದ್ದರು. ಆ ಮೂಲಕ ತಾವು ಕೇಂದ್ರದ ಮಂತ್ರಿಯಾಗಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ತಮ್ಮ ಸಹೋದರ ಎಚ್.ಡಿ.ರೇವಣ್ಣರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದ್ದರು. ಆದರೆ, ಅವರ ಆಸೆ ಈಡೇರಲಿಲ್ಲ ಎಂದರು.
ನಾಯಕತ್ವ ಬದಲಾವಣೆ ಹೈಕಮಾಂಡ್ಗೆ ಬಿಟ್ಟದ್ದು : ರಾಷ್ಟ್ರೀಯ ನಾಯಕರಾದ ಅರುಣ್ಜೇಟ್ಲಿಯವರು ನಾಯಕತ್ವ ಬದಲಾವಣೆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವುಗಳು ಬದ್ಧರಾಗಿದ್ದೇವೆ ಎಂಬ ಉತ್ತರವನ್ನು ನೀಡಿದರು. ಹಾಗಾದರೆ, ನಾಯಕತ್ವ ಬದಲಾವಣೆ ನಿಶ್ಚಿತವೇ? ಎಂಬ ಪ್ರಶ್ನೆಗೆ, ಬದಲಾವಣೆ ಆಗೇ ಆಗುತ್ತದೆಂದು ಯಾರೂ ಎಲ್ಲಿಯೂ ಹೇಳಿಲ್ಲ. ನಾಯಕತ್ವ ಬದಲಾವಣೆ ಎಂಬ ಪ್ರಶ್ನೆಯೇ ಉದ್ಭವವಾಗಿಲ್ಲ. ಅದು ಕೇವಲ ತಪ್ಪು ಭಾವನೆಯಾಗಿದೆ ಎಂದಷ್ಟೇ ಹೇಳಿದರು.
ಆಯೋಗದ ತೀರ್ಪು ಸರಿ : ಸೋಮಶೇಖರ್ ನೀಡಿರುವ ವರದಿಗೆ ವಿರೋಧ ವ್ಯಕ್ತವಾಗಿದೆಯಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಹಿಂದೂ ಸಂಘಟನೆ ಹಿಂದೂಗಳ ಪರ ತೀರ್ಪು ಕೊಟ್ಟರೆ, ಸತ್ಯಹೇಳಿದರೆ ಅದು ಸರಿಯಲ್ಲ. ಆದರೆ, ಹಿಂದೂಗಳ ವಿರುದ್ಧ, ಹಿಂದೂ ಸಂಘಟನೆಗಳ ವಿರುದ್ಧ ತೀರ್ಪು ಕೊಟ್ಟರೆ ಮಾತ್ರ ಸರಿಯಾಗುತ್ತದೆ. ಹೀಗಾದರೆ, ದೇಶದಲ್ಲಿ ಯಾವುದೇ ಆಯೋಗ ನೀಡುವ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಯೋಗಕ್ಕೂ ಸತ್ಯ ಹೊರಹಾಕಲು ಆಗುವುದಿಲ್ಲ ಎಂಬ ಉತ್ತರವನ್ನು ನೀಡಿದರು.