ಪಂ. ಜೋಶಿ ಅವಮಾನಿಸಿದವರನ್ನು ಏನ್ಮಾಡ್ಬೇಕು?
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಅನ್ನುವ ಹಾಗೆ. ಭೀಮಸೇನ ಜೋಶಿ ಅವರಂತಹ ಕಸ್ತೂರಿ ಪರಿಮಳವನ್ನು ಅರಿಯದೆ, ಕನಿಷ್ಠ ಪ್ರಜ್ಞೆ ಇಲ್ಲದೆ ಪ್ರಜ್ಞೆ ತಪ್ಪಿದವರಂತೆ ಟೀಕೆ ಮಾಡಿರುವ ಚಿಕ್ಕಪೇಟೆ ಕಾರ್ಪೊರೇಟರ್ ಎ ಎನ್ ಶಿವಕುಮಾರ್ ಅವರೆಡೆಗೊಂದು ದಿಕ್ಕಾರವಿರಲಿ. ಕುಡಿಯುವುದು ಒಂದು ಅಪರಾಧ ಎಂದು ಬಿಂಬಿಸಿರುವ ಈ ಕಾರ್ಪೊರೇಟರ್ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕು? ಭೀಮಸೇನ ಜೋಶಿ ಕುಡಿಯುತ್ತಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುಂಚೆ ಕುಡಿದೆ ಹೋಗುತ್ತಿದ್ದರು ಎನ್ನುವುದು ಶುದ್ಧ ಕುಚೋದ್ಯದ ಮಾತು.
ಜೋಶಿ ಬಗ್ಗೆ ಆರೋಪ ಮಾಡಿರುವುದು ಬಿಜೆಪಿ ಪಕ್ಷದ ಕಾರ್ಪೊರೇಟರ್. ಅದೇನೋ ಗೊತ್ತಿಲ್ಲ. ಇತ್ತೀಚೆಗೆ ಈ ಪಕ್ಷದಲ್ಲಿ ಭ್ರಷ್ಟರು, ಅತ್ಯಾಚಾರಿಗಳು, ಲೈಂಗಿಕ ಕಿರುಕುಳ ನೀಡುವವರು, ರೌಡಿಗಳಂತೆ ಸಾರ್ವಜನಿಕ ಸ್ಥಳದಲ್ಲಿ ಅರಚಾಡುವವರು ಹೆಚ್ಚಾಗಿದ್ದಾರೆ. ಇದರಿಂದ ಆ ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆ ಉಂಟಾಗಿರುವುದಂತೂ ಸುಳ್ಳಲ್ಲ. ದೇಶ ಭಕ್ತ ಸಂಸ್ಥೆ ಎಂಬ ಹೆಸರು ಪಡೆದಿರುವ ಆರೆಸ್ಸೆಸ್ ಗರಡಿಯಲ್ಲಿ ಪಳಗಿರುವ ಬಿಜೆಪಿ ನಾಯಕರು ಇಂತಹ ಅರಿವುಗೇಡಿ ಕಾರ್ಪೊರೇಟರ್ ಮುಖಕ್ಕೆ ಸರಿಯಾಗಿ ಮಂಗಳಾರತಿ ಮಾಡಬೇಕು ಎನ್ನುವುದು ಸಂಗೀತ ಅಭಿಮಾನಿಗಳು ಅಷ್ಟೇ ಅಲ್ಲ ರಾಜ್ಯ ಜನತೆ ಒತ್ತಾಯಿಸುತ್ತಿದೆ.
ಜೋಶಿ ಅವರನ್ನು ಕೌನ್ಸಿಲ್ ಸಭೆಯಲ್ಲಿ ಅವಮಾನಿಸಿದ ಕಾರ್ಪೊರೇಟರ್ ನಿಗೆ ಶಿಕ್ಷೆ ಆಗಬೇಕು. ಹಾಗಂತ, ಬಿಜೆಪಿ ತನ್ನ ಕಾರ್ಪೊರೇಟರ್ ನ ಸದಸ್ಯತ್ವವನ್ನು ರದ್ದು ಮಾಡಲಿ ಎನ್ನುವುದು ಅತಿರೇಕವಾದೀತು. ಕನಿಷ್ಠ ಪಕ್ಷ ಬಿಬಿಎಂಪಿ ಸದಸ್ಯರಿಗೆ ಅಷ್ಟು ಎಲ್ಲ ಪಕ್ಷಗಳ ಜನಪ್ರತಿನಿಧಿಗಳಿಗೆ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದು ತಿಳುವಳಿಯ ಕಾರ್ಯಾಗಾರವನ್ನಾದರೂ ಮಾಡುವುದು ಒಳಿತಲ್ಲವೇ. ಇದರಿಂದ ಮುಂದಿನ ದಿನಗಳಲ್ಲಿ ಸಾಧಕರಿಗೆ ಆಗುವ ಅವಮಾನಗಳನ್ನು ತಡೆಯಬಹುದಲ್ಲವೇ.