ಶಿವಮೊಗ್ಗದಲ್ಲಿ ಫೆ.3ರಂದು ಮೈಲಾರಿ ಯಾತ್ರೆ
ಅಂದು ಬೆಳಿಗ್ಗೆ 10.30ಕ್ಕೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಮೈಲಾರಿ ಜಾತ್ರೆ ಹೊರಡಲಿದ್ದು, ವಿಜಯಯಾತ್ರೆಯನ್ನು ಚಿತ್ರದ ನಾಯಕ ನಟ ಶಿವರಾಜ್ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ನಟಿ ಸಂಜನಾ ಸೇರಿದಂತೆ ಚಿತ್ರ ತಂಡದ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಚಂದ್ರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಲಾರಿ ಚಿತ್ರ ರಾಜ್ಯಾದ್ಯಂತ ಒಟ್ಟು 129 ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಚಿತ್ರ ಅತ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರಲ್ಲದೆ, ಇದಕ್ಕಾಗಿಯೇ ಶಿವಮೊಗ್ಗದಲ್ಲಿ ಮೈಲಾರಿಜಾತ್ರೆಯನ್ನು ನಡೆಸಲಾಗುತ್ತಿದೆ. ಜೊತೆಗೆ ಅಂದು ಮಧ್ಯಾಹ್ನ ಶಿಕಾರಿಪುರದಲ್ಲೂ ಮೈಲಾರಿ ಜಾತ್ರೆ ವಿಜಯಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಚಿತ್ರದ ನಿರ್ಮಾಪಕರನ್ನು ಕೆಚ್ಚೆದೆಯ ನಿರ್ಮಾಪಕ ಎಂದು ಕೊಂಡಾಡಿದ ಅವರು, ಮೈಲಾರಿ ಚಿತ್ರಕ್ಕೆ ಜನರಿಂದ ಇದೇ ರೀತಿ ಪ್ರೋತ್ಸಾಹ ಸಿಕ್ಕರೆ 200 ದಿನ ಪೂರೈಸುತ್ತದೆ. ಆ ಲಕ್ಷಣ ಗೋಚರಿಸುತ್ತಿದೆ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಜೆಡಿಎಸ್ನ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಛಾಯಾಗ್ರಾಹಕ ಚಂದ್ರಶೇಖರ್, ಸುದೀಂದ್ರ, ರಾಜೇಂದ್ರ ಉಪಸ್ಥಿತರಿದ್ದರು.