ಟೀಮ್ ಇಂಡಿಯಾಕ್ಕೆ ಶ್ರೀ ಗಾನಬಜಾನ
ಕೊಚ್ಚಿ, ಫೆ. 1 : ಈ ಸಲದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲನಾಗಿರುವ ವೇಗಿ ಎಸ್ ಶ್ರೀಶಾಂತ್ ಅವರು ಹಾಡುವ ಮೂಲಕ ಧೋನಿ ನೇತೃತ್ವದ ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾರೆ.
ಕೊಚ್ಚಿಯಲ್ಲಿ ಏರ್ಪಡಿಸಲಾಗಿದ್ದ ಎಸ್-36 ಕಾರ್ಯಕ್ರಮದಲ್ಲಿ ಸ್ವಂತ ರಚಿಸಿದ ಹಲೋ ಶೇರ್ ಬನ್ ಕೇ ತೂ ಜಂಗ್ ಲಡ್ ಲೇ ಎಂಬ ಹಿಂದಿ ಹಾಡನ್ನು ಹಾಡಿದ್ದಾರೆ. ಸೋಮವಾರ ರಾತ್ರಿ ನಗರದ ಜೋಸ್ ಥಾಮಸ್ ಸೆಂಟರ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ತಮಿಳಿನ ಅಂಬುಲ್ಲಾ ಅಝಕೆ ಎಂಬ ಮನಮೋಹಕ ಗೀತೆಯನ್ನು ಸಹ ಶ್ರೀಕಾಂತ್ ಹಾಡಿ ರಂಜಿಸಿದರು. ಜೊತೆಗೆ ಕಮೀನೆ ಚಿತ್ರದ ಹಾಡಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಎಸ್-36 ಅಂದರೆ ಎಸ್-ಶ್ರೀಶಾಂತ್ ಮತ್ತು 36 ಅವರ ಅದೃಷ್ಟದ ಜರ್ಸಿ ನಂಬರ್. ಈ ಬ್ಯಾಂಡ್ ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈ, ಚಂಡೀಗಢದಲ್ಲಿ ಇಂತಹ ಪ್ರದರ್ಶನ ನಡೆಸದೆ. ಐಪಿಎಲ್ 4 ನಂತರವೂ ದುಬೈನಲ್ಲೂ ಈ ಬ್ಯಾಂಡ್ ಕಾರ್ಯಕ್ರಮ ನೀಡುವ ಯೋಜನೆ ಹೊಂದಿದೆ.
ಈ ಬ್ಯಾಂಡ್ ನಲ್ಲಿ ಶ್ರೀಶಾಂತ್ ಅವರು ಕಾರ್ಯಕ್ರಮ ನಿರೂಪಣೆ, ಗಾಯಕ ಮತ್ತು ನರ್ತಕ ಎಲ್ಲವೂ ಆಗಿರುತ್ತಾರೆ. ಹಿನ್ನೆಲೆ ಗಾಯಕ ಮಧು ಬಾಲಕೃಷ್ಣನ್ ಮತ್ತು ದೀಪಕ್ ವಾರಿಯರ್ ಬ್ಯಾಂಡ್ ನಲ್ಲಿರುತ್ತಾರೆ. ಶ್ರೀಶಾಂತ್ ಅವರ ಎಸ್ 36 ಬ್ಯಾಂಡ್ ಕಾರ್ಯಕ್ರಮಗಳಿಗೆ ಬಾಲಿವುಡ್ ತಾರೆಯರೂ ಹೆಜ್ಜೆ ಹಾಕುವ ಸಾಧ್ಯತೆ ಇದೆ. ಫೆ.19 ರಿಂದ ವಿಶ್ವಕಪ್ ಆರಂಭವಾಗಲಿದೆ.