ಭೀಮಸೇನ ಜೋಶಿ ದೊಡ್ಡ ಕುಡುಕ : ಬಿಜೆಪಿ ಸದಸ್ಯ
ಬೆಂಗಳೂರು ಮಹಾನಗರ ಪಾಲಿಕೆ ಚಿಕ್ಕಪೇಟೆ ವಾರ್ಡ್ ನ ಬಿಜೆಪಿ ಜನಪ್ರತಿನಿಧಿ ಶಿವಕುಮಾರ್ ಅವರು, ಭೀಮಸೇನ ಜೋಶಿಯವರು ಬಹುದೊಡ್ಡ ಗಾಯಕರಾಗಿದ್ದರು. ಅವರು ಹಾಡಲು ವೇದಿಕೆ ಏರುವ ಮುನ್ನ ಮದ್ಯಪಾನ ಮಾಡುತ್ತಿದ್ದರು. ಮದ್ಯಪಾನ ಮಾಡದೆ ಅವರೂ ಎಂದೂ ಹಾಡುತ್ತಿರಲಿಲ್ಲ. ಈ ಸಂತಾಪ ಸೂಚಕ ಸಭೆಯಲ್ಲಿ ನಾವು "ಕುಡುಕರಿಗೂ ಗೌರವ ನೀಡಲೇಬೇಕು" ಎಂಬ ಅಸಂಬದ್ದ ಪದವನ್ನು ಬಳಸಿದರು.
ಶಿವಕುಮಾರ್ ಹೇಳಿಕೆಗೆ ಪಕ್ಷಾತೀತವಾಗಿ ಎಲ್ಲರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಶಿವಕುಮಾರ್ ಅವರ ಮಾತಿನಿಂದ ಸಭೆಯಲ್ಲಿದ್ದ ಬಿಜೆಪಿಯ ಹಿರಿಯ ಸದಸ್ಯರು ತೀವ್ರ ಮುಜುಗರ ಅನುಭವಿಸಬೇಕಾಯಿತು. ಪ್ರತಿಪಕ್ಷ ಸದಸ್ಯರು, ಪ್ರಜ್ಞಾವಂತ, ಬುದ್ಧಿವಂತರ ಪಕ್ಷ ಎಂದು ಕರೆಸಿಕೊಳ್ಳುವ ನೀವು ಈ ನಾಡಿನ ಬಹುದೊಡ್ಡ ವಿದ್ವಾಂಸನಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಇದೇ ರೀತಿಯೇ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಇನ್ನೇನು ಗದ್ದಲ ಶುರುವಾಗುತ್ತದೆ ಅನ್ನುವಷ್ಟರಲ್ಲಿ ಮೇಯರ್ ನಟರಾಜ್ ಸಭೆಯನ್ನು ಮುಂದೂಡಿದರು.
ಸಭೆ ಮುಂದೂಡಿದ ನಂತರ ಮೇಯರ್ ಎಸ್ ಕೆ ನಟರಾಜ್ ಹಾಗೂ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಅವರು ಶಿವಕುಮಾರ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. 'ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಗೊತ್ತಿಲ್ವಾ ನಿನಗೆ, ಮಾತನಾಡುವುದಕ್ಕಿಂತ ಸುಮ್ಮನೆ ಇದ್ದಿದ್ದರೆ ಪಕ್ಷದ ಗೌರವ ಉಳಿಯುತ್ತಿತ್ತು' ಎಂದು ಛೀಮಾರಿ ಹಾಕಿದ್ದಾರೆಂದು ತಿಳಿದು ಬಂದಿದೆ. ಶಿವಕುಮಾರ್ ಅವರು ಈ ರೀತಿ ಮಾತನಾಡಬಾರದಿತ್ತು. ನಾಳಿನ ಸಭೆಯಲ್ಲಿ ಅವರ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗುವುದು ಎಂದು ಮೇಯರ್ ಸ್ಪಷ್ಟನೆ ನೀಡಿದ್ದಾರೆ.