ನೆಹರೂ ಕ್ರೀಡಾಂಗಣ ದುರ್ಬಳಕೆ, ಪ್ರತಿಭಟನೆ
ಇಲ್ಲಿ ಕ್ರೀಡೇತರ ಚಟುವಟಿಕೆಗೆ ಅವಕಾಶ ನೀಡದಂತೆ ನೂರಾರು ಬಾರಿ ಕ್ರೀಡಾಪಟುಗಳು,ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಸಂಸ್ಥೆಗಳು ಆಗ್ರಹಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಅಧಿಕಾರಿಗಳು ಹಾಗೂ ಜಿಲ್ಲಾ ಕ್ರೀಡಾಂಗಣ ಸಮಿತಿ ರಾತ್ರೋರಾತ್ರಿ ಯಾವುದೇ ಲೆಕ್ಕಕ್ಕಿಲ್ಲದ ವ್ಯವಹಾರಿಕ ಸಂಸ್ಥೆಗಳ ಜೊತೆ ಮರ್ಜಿಯಾಗಿ ಜಾಗವನ್ನು ನೀಡುತ್ತಾ ಕ್ರೀಡೆಗೆ ಎಳ್ಳು ನೀರು ಬಿಡುತ್ತಿದ್ದಾರೆ.
ಇಲ್ಲಿ ನೆಹರೂ ಕ್ರೀಡಾಂಗಣವನ್ನು ನೋಡಿಕೊಳ್ಳುವ ಜಿಲ್ಲಾ ಕ್ರೀಡಾಂಗಣ ಸಮಿತಿ ಹಾಗೂ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಕ್ರೀಡೆಯನ್ನು ಮರೆತು ವ್ಯವಹಾರಿಕವಾಗಿ ಹಣದ ಬೆನ್ನು ಹತ್ತಿದ್ದು, ಜಿಲ್ಲಾಡಳಿತ ಗಮನಿಸಿ ಕ್ರೀಡಾಂಗಣಸಮಿತಿಯನ್ನು ಬದಲಿಸಿ ಕಾನೂನಿನ ಪ್ರಕಾರ ಸಮಿತಿ ರಚಿಸಬೇಕು.
ಜಿಲ್ಲಾ ಓಲಂಪಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್, ಸಹ್ಯಾದ್ರಿ ಸ್ನೇಹ ಸಂಘ, ಹಾಗೂ ಎಲ್ಲಾ ಕ್ರೀಡಾ ಸಂಸ್ಥೆಗಳು ಮತ್ತು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸೇರಲಿದ್ದು ಇನ್ನು ಮುಂದೆ ನೆಹರೂ ಕ್ರೀಡಾಂಗಣ ಕೇವಲ ಕ್ರೀಡೆಗೆ ಮಾತ್ರ ಮೀಸಲಿರಬೇಕು. ಯಾವುದೇ ಕಾರಣಕ್ಕೂ ನೆಹರೂ ಕ್ರೀಡಾಂಗಣದಲ್ಲಿ ಅನ್ಯ ಚಟುಟಿಕೆಗಳಿಗೆ ಅವಕಾಶವಾಗದಂತಿರಲಿ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಅಳವಡಿಸಿರುವ ಮರದ ನೆಲಹಾಸು ಕಳಪೆ ಕಾಮಗಾರಿ ತನಿಖೆಗೆ ಒತ್ತಾಯಿಸುವ ಉದ್ದೇಶ ಹೊಂದಿದೆ.
ಇಲ್ಲಿರುವ ಕ್ರೀಡಾ ಹಾಸ್ಟೆಲ್ನಲ್ಲಿ ಒಟ್ಟು 40ಕ್ಕೂ ಹೆಚ್ಚು ಮಕ್ಕಳಿದ್ದು, ಅವರಿಗೆ ಕಲಿಯಲು ಕ್ರೀಡಾಂಗಣವೇ ಖಾಲಿಯಾಗುತ್ತಿಲ್ಲ. ವಾಲಿಬಾಲ್, ಫುಟ್ಬಾಲ್ , ಹಾಕಿ, ಹ್ಯಾಂಡ್ ಬಾಲ್, ಬಾಲ್ ಬ್ಯಾಡ್ಮಿಂಟನ್ ಇತ್ಯಾದಿ ಕ್ರೀಡೆ ಕಲಿಯಲು ಕಷ್ಟವಾಗುತ್ತಿದೆ.
ಕಾನೂನು ಸಮರಕ್ಕೂ ಸಿದ್ಧ: ಅದೇ ರೀತಿ ನೆಹರೂ ಕ್ರೀಡಾಂಗಣದ ಬಳಕೆ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳುವವರೆಗೂ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಹಾಗೂ ಕಾನೂನಾತ್ಮಕ ಹೋರಾಟಕ್ಕೂ ಸಿದ್ದತೆ ನಡೆಸಿದೆ. ನಮ್ಮ ಬೇಡಿಕೆಗೆ ಜಿಲ್ಲಾ ಕ್ರೀಡಾಂಗಣ ಸಮಿತಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಓಲಂಪಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಎಸ್.ಶಶಿ ತಿಳಿಸಿದ್ದಾರೆ. [ಶಿವಮೊಗ್ಗ]