ನನಗೆ ಜೀವಬೆದರಿಕೆಯಿದೆ : ಯಡಿಯೂರಪ್ಪ ಆತಂಕ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಎರಡನೆಯ ದಿನದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಬೆಳಿಗ್ಗೆ 9 ಗಂಟೆಗೆ ಹೆಲಿಕಾಪ್ಟರ್ನಲ್ಲಿ ಸುತ್ತೂರಿಗೆ ಆಗಮಿಸಿದಾಗ ಅವರನ್ನು ಮಾತನಾಡಿಸಿದ ಸಂದರ್ಭ ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು.
ನನ್ನ ವಿರುದ್ಧ ಮಾಟ-ಮಂತ್ರ ಮಾಡುವ ಮೂಲಕ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಆದರೆ ನಾನು ದೇವರ ಮೇಲೆ ಭಾರ ಹಾಕಿ ದಿನಕಳೆಯುತ್ತಿದ್ದೇನೆ. ಯಾರಿಂದಲೂ ನನ್ನನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಾಧ್ಯವಿಲ್ಲ ಮುಂದಿನ ಅವಧಿಗೂ ನಾನೇ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಹಾಗೂ ಸರ್ಕಾರದ ವಿರುದ್ಧ ವಿಪಕ್ಷದವರು ಮಾಡುತ್ತಿರುವ ಪಿತೂರಿ ಹೆಚ್ಚು ದಿನ ನಡೆಯಲ್ಲ. ಸದ್ಯದಲ್ಲಿಯೇ ವಿಪಕ್ಷಗಳ ಅಕ್ರಮ ಬಯಲು ಮಾಡುವುದಾಗಿ ಹೇಳಿದ ಅವರು, ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಬಳಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ನೂತನ ವಧು-ವರರಿಗೆ ಶುಭಹಾರೈಸಿದರು. [ನಾಗರಿಕ ಪತ್ರಕರ್ತ]