ಕಂಬಿಯ ಹಿಂದೆ 'ಮಾಗಡಿ ಮಂದಾರ' ಸೃಷ್ಟಿಕರ್ತ
ಘಟನೆಯ ವಿವರ : ಮಾಗಡಿ ಪಟ್ಟಣದಿಂದ ಮೂರು ಕಿಮೀ ದೂರದಲ್ಲಿರುವ ಉಡುವೇಗೆರೆಯ ಶಾಲಿನಿ(ಹೆಸರು ಬದಲಿಸಲಾಗಿದೆ) ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಶಾಲಿನಿಯ ಪಕ್ಕದ ಊರು ನೆಸೆಪಾಳ್ಯದ ರವಿ ಅಲಿಯಾಸ್ ರಂಗನಾಥ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದವನು. ರಂಗನಾಥನ ಪ್ರೀತಿಯ ಸೆಳೆತಕ್ಕೊಳಗಾದ ಶಾಲಿನಿ ಕಳೆದ 6 ತಿಂಗಳಿನಿಂದ ಪ್ರೀತಿ ಪ್ರೇಮ ಅಂತ ಕಾಲ ಕಳೆದಿದ್ದಾಳೆ. ಪ್ರೀತಿಯ ಹೆಸರಲ್ಲಿ ಸಾಕಷ್ಟು ಸಲುಗೆ ಬೆಳೆಸಿಕೊಂಡ ರವಿ ಶಾಲಿನಿಯನ್ನ ಸಾಕಷ್ಟು ಬಾರಿ ದೈಹಿಕವಾಗಿ ಬಳಸಿಕೊಂಡಿದ್ದಾನೆಂದು ಹೇಳಲಾಗಿದೆ (ರವಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದಂತೆ).
ಕಳೆದ 40 ದಿನಗಳ ಹಿಂದೆಯೇ ಶಾಲಿನಿಯ ಮನೆಯವರು ಯಾರು ಇಲ್ಲದ ಸಂದರ್ಭದಲ್ಲಿ ಶಾಲಿನಿಯ ಮನೆಯ ಹಿಂದೆಯ ತೋಟವೊಂದರಲ್ಲಿ ಶಾಲಿನಿಯನ್ನು ವಿವಸ್ತ್ರಗೊಳಿಸಿದ ರವಿ ಅಲಿಯಾಸ್ ರಂಗನಾಥ ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾನೆ. ನಂತರ ತನ್ನ ಸ್ನೇಹಿತರ ಮೊಬೈಲ್ಗಳಿಗೂ ಬ್ಲೂಟೂಥ್ ಮುಖಾಂತರ ವರ್ಗಾಯಿಸಿ ವಿಕೃತ ಆನಂದವನ್ನು ಅನುಭವಿಸಿದ್ದಾನೆ.
"ಮೈಸೂರು ಮಲ್ಲಿಗೆ"ಯ ರೀತಿಯಲ್ಲಿ "ಮಾಗಡಿ ಮಂದಾರ" ಹೆಸರಲ್ಲಿ ಮಾಗಡಿ, ರಾಮನಗರ, ಕುಣಿಗಲ್, ಬೆಂಗಳೂರು ಮತ್ತಿತರೆಡೆಗಳಲ್ಲಿ ಈ ದೃಶ್ಯಾವಳಿಗಳು ಮೊಬೈಲ್ನಿಂದ ಮೊಬೈಲ್ಗೆ ಹರಡಿ ಭಾರೀ ಸುದ್ದಿಯನ್ನು ಮಾಡಿದವು. ಈ ಸಂದರ್ಭದಲ್ಲಿ ಶಾಲಿನಿಯ ಹೆತ್ತವರಿಗೆ ವಿಷಯ ತಿಳಿದಾಕ್ಷಣ ಮಾಗಡಿ ಪೊಲೀಸ್ ಠಾಣೆಗೆ ಕರೆತಂದು ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ? : ಶಾಲಿನಿಯೇ ಖುದ್ದು ಪೊಲೀಸರಿಗೆ ರವಿ ಅಲಿಯಾಸ್ ರಂಗನಾಥ್ ಮತ್ತು ಮಂಜ ಎಂಬುವವನ ವಿರುದ್ಧ ದೂರು ನೀಡಿದ್ದಾಳೆ. 'ರವಿ ಮೊದಲಿಗೆ ನನಗೆ ಚಾಕು ಚೂರಿ ತೋರಿಸಿ ಯಾರಿಗೂ ಹೇಳದಂತೆ ಬೆದರಿಸಿ ಬೆತ್ತಲು ಗೊಳಿಸಿ ಮೊಬೈಲ್ನಿಂದ ಚಿತ್ರೀಕರಣ ಮಾಡಿದ್ದಾನೆ. ನಾನು ರವಿಯನ್ನು ಪ್ರೀತಿ ಮಾಡೇ ಇಲ್ಲ. ನಾನು ಅವನಿಗೆ ಫೋನ್ ಕೂಡ ಮಾಡಿಲ್ಲ. ರವಿ ಚಿತ್ರೀಕರಣ ಮಾಡಿದ್ದನ್ನು ಮಂಜ ಎಂಬುವವನು ಮೊಬೈಲ್ನಿಂದ ಮೊಬೈಲ್ಗೆ ವರ್ಗಾಯಿಸಿ ನಾನು ಮತ್ತು ನನ್ನ ಕುಟುಂಬದವರು ತಲೆ ಎತ್ತದಂತೆ ಮಾಡಿದ್ದಾರೆ" ಎಂದು ದೂರು ನೀಡಿದ್ದಾಳೆ.
ರವಿ ಹೇಳಿದ್ದು : "ನಾನು ಮತ್ತು ಶಾಲಿನಿ ಪ್ರೀತಿ ಮಾಡ್ತಿದ್ವಿ. ಗಂಟೆಗಟ್ಟಲೆ ನನ್ನ ಮೊಬೈಲ್ಗೆ ಫೋನ್ ಮಾಡಿ ಮಾತಾಡ್ತಿದ್ದಳು. ಅವಳು ಹೇಳಿದ ಹಾಗೇ ನಾನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದು ಸತ್ಯ. ನಾನು ಮಾಡಿದ ತಪ್ಪಿಗೆ ಬೇಕಾದ್ರೆ ಮದುವೆ ಆಗಲಿಕ್ಕೆ ಸಿದ್ಧವಾಗಿದ್ದೀನಿ" ಎಂದು ಪೊಲೀಸರೆದುರು ವಿಚಾರಣೆ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.
ಮಾಲೆ ತೊಟ್ಟಿದ್ದ ರವಿ : ಮಾಡೋದೆಲ್ಲಾ ಅನಾಚಾರ ಮನೆಮುಂದೆ ಬೃಂದಾವನ ಎಂಬಂತೆ ರವಿ ಮಾಡಬಾರದ ಕೆಲಸ ಮಾಡಿ ಮಾಲೆ ತೊಟ್ಟು ಸ್ವಾಮಿ ಶರಣಂ ಅಯ್ಯಪ್ಪ ಎನ್ನುತ್ತಾ ಶಬರಮಲೆಗೆ ಹೊರಡಲು ಸಿದ್ಧನಾಗಿದ್ದ. ಅಷ್ಟರಲ್ಲಿ ರವಿಯ ಅನಾಚಾರದ ವಿಚಾರ ತಿಳಿದ ಪೊಲೀಸರು ರವಿ ಮತ್ತು ಮಂಜ ತೊಟ್ಟಿದ್ದ ಮಾಲೆಯನ್ನ ಬಿಚ್ಚಿಸಿ ಕೇಸು ದಾಖಲಿಸಿ ಕಂಬಿಎಣಿಸಲು ಕಳುಹಿಸಿಕೊಟ್ಟಿದ್ದಾರೆ. [ಎಮ್ಎಮ್ಎಸ್]