ವಿಶ್ವಕಪ್ ನಿಂದ ತಿರುಕರಿಗೆ ಉಳಿಗಾಲವಿಲ್ಲ
ಢಾಕಾ, ಜ.28: ಜಾಗತಿಕ ಕ್ರಿಕೆಟ್ ಹಬ್ಬ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಢಾಕಾ, ಚಿಟ್ಟಗಾಂಗ್ ನಲ್ಲಿ ಭರ್ಜರಿ ತಯಾರಿ ನಡೆದಿದೆ. ಆದರೆ, ಮೂಲ ಸೌಕರ್ಯ ನಿರ್ಮಾಣ, ಪ್ರವಾಸಿಗರಿಗೆ ವ್ಯವಸ್ಥೆ, ನಗರ ಸೌಂದರ್ಯ ವೃದ್ಧಿ ಮುಂತಾದ ಆಲೋಚನೆಯಲ್ಲಿ ತೇಲುತ್ತಿರುವ ಇಲ್ಲಿನ ಕ್ರಿಕೆಟ್ ಮಂಡಳಿ, ಸ್ಥಳೀಯ ತಿರುಕರಿಗೆ, ಉಂಡಾಡಿಗಳಿಗೆ, ಬೀದಿ ಬದಿ ವ್ಯಾಪಾರಿಗಳನ್ನು ಹೊರದೂಡಲು ತೊಡಗಿದ್ದಾರೆ. ಫೆ. 17ರಂದು ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಮೊದಲ ಪಂದ್ಯ ಆರಂಭವಾಗುವ ವೇಳೆಗೆ ನಗರವನ್ನು ಭಿಕ್ಷುಕ ರಹಿತವನ್ನಾಗಿಸಲು ಸಕಲ ಸಿದ್ಧತೆ ನಡೆದಿದೆ.
ಹಾದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ಕಾಲದೂಡುತ್ತಿದ್ದವರನ್ನು ಬಲವಂತವಾಗಿ ಪುನರ್ವಸತಿ ಕೇಂದ್ರಗಳಿಗೆ ದೂಡಲಾಗುತ್ತಿದೆ. ಇಲ್ಲಿನ ಸರ್ಕಾರದ ಗೃಹ ಸಚಿವೆ ಸಹಾರ ಖತುನ್ ಈಗಾಗಲೇ ಆದೇಶ ಹೊರಡಿಸಿದ್ದು, ಈಗಾಗಲೇ ಕಾರ್ಯಾಚರಣೆ ಸಾಂಗವಾಗಿ ನಡೆದಿದೆ.
ವಿಶ್ವಕಪ್ 2011 ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಿ
ವ್ಯಾಪಾರಿಗಳಿಗೂ ನೆಲೆ ಇಲ್ಲ: ಭಿಕ್ಷುಕರಿಗೆ ನೆಲೆ ಸಿಕ್ಕಿದರೂ, ಬೀದಿ ಬದಿ ವ್ಯಾಪಾರಿಗಳಿಗೆ ಏನು ಸಿಗುತ್ತಿಲ್ಲ. ಅಂಗಡಿಗಳನ್ನು ಬಂದ್ ಮಾಡಲು ಸೂಚನೆಯಷ್ಟೇ ಸಿಕ್ಕಿದೆ. ಸುರಕ್ಷಿತೆಯ ಕಾರಣಗಳನ್ನು ನೀಡಿ, ಸಣ್ಣಪುಟ್ಟ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಢಾಕಾದ ಖಾರ್ವಾನ್ ಬಜಾರ್ ಬಳಿ ಪುಸ್ತಕ ವ್ಯಾಪಾರಿಯಾಗಿರುವ ಮಹಮ್ಮದ್ ಸುಮನ್ ಗೋಳಾಡುತ್ತಿದ್ದಾರೆ.
ಬಾಂಗ್ಲಾದೇಶವಲ್ಲದೆ, ಭಾರತ ಹಾಗೂ ಶ್ರೀಲಂಕಾದಲ್ಲೂ ವಿಶ್ವಕಪ್ 2011ರ ಪಂದ್ಯಗಳು ನಡೆಯುತ್ತಿದ್ದು, ಈ ರೀತಿ ಆದೇಶ ಸದ್ಯಕ್ಕಂತೂ ಜಾರಿಯಾಗಿಲ್ಲ. ಬಾಂಗ್ಲಾದೇಶದ ಢಾಕಾ ಹಾಗೂ ಬಂದರು ನಗರಿ ಚಿಟ್ಟಗಾಂಗ್ ನಲ್ಲಿ 6 ಪಂದ್ಯಗಳು ಹಾಗೂ 2 ಕ್ವಾಟರ್ ಫೈನಲ್ ಪಂದ್ಯಗಳು ನಡೆಯಲಿದೆ.
ಬಾಂಗ್ಲಾದೇಶದಲ್ಲಿ ಭಿಕ್ಷಾಟನೆಗೆ ನಿಷೇಧ ಹೇರಿ ಎರಡು ವರ್ಷಗಳಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಭಿಕ್ಷಾಟನೆ ಮಾಡುವವರನ್ನು ಹಿಡಿದು ಗರಿಷ್ಠ ಮೂರು ತಿಂಗಳು ಜೈಲಿಗೆ ಕಳಿಸುವ ಅಧಿಕಾರ ಅಲ್ಲಿನ ಪೊಲೀಸರಿಗೆ ಇದೆ. ಆದರೆ, ವಿಶ್ವಬ್ಯಾಂಕ್ ಸಮೀಕ್ಷೆಯಂತೆ ಢಾಕಾದ ಒಟ್ಟು ಜನಸಂಖ್ಯೆಯಲ್ಲಿ ಶೇ. 40 ರಷ್ಟು ಮಂದಿ ತೀರಾ ನಿರ್ಗತಿಕ ಸ್ಥಿತಿಯಲ್ಲಿದ್ದಾರೆ. ಬಡವರ್ಗ ಹಾಗೂ ನಿರಾಶ್ರಿತರ ಆಶ್ರಯ ತಾಣವಾದ ಢಾಕಾದಲ್ಲಿ ಭಿಕ್ಷಾಟನೆ ನಿಲ್ಲಿಸುವುದು ಕಷ್ಟದ ಕೆಲಸ. ಕ್ರಿಕೆಟ್ಟಿಗರಿಗೆ ರತ್ನಗಂಬಳಿ ಹಾಸುವ ಭರದಲ್ಲಿ ನಿರ್ಗತಿಕರಿಗೆ ಸೂಕ್ತ ನೆಲೆ ಕಲ್ಪಿಸುವುದನ್ನು ಮರೆಯದಿದ್ದರೆ ಸಾಕು. [ವಿಶ್ವಕಪ್]