ಗತ ಇತಿಹಾಸಕ್ಕೆ ಸಾಕ್ಷಿಯಾದ ಹಂಪಿ ಉತ್ಸವ
ರಾಣಿ ಸ್ನಾನಗೃಹದ ಬಳಿ ರಾಜ್ಯ ಪತ್ರಾಗಾರ ಏರ್ಪಡಿಸಿರುವ ವಸ್ತುಪ್ರದರ್ಶನದಲ್ಲಿ ರಾಜ್ಯ ಪತ್ರಗಾರದ ಮಳಿಗೆಯಲ್ಲಿ ವಿಶೇಷ ಐತಿಹಾಸಿಕ ದಾಖಲೆ ಪತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. 1866ರಲ್ಲಿ ಹೊರಬಂದ ಮೈಸೂರಿನ ಪ್ರಥಮ ಕನ್ನಡ ಗೆಜೆಟ್, 1904ರ ಬಳ್ಳಾರಿ ಗೆಜೆಟ್, 1923ರಲ್ಲಿ ಬಳ್ಳಾರಿ ಜಿಲ್ಲೆಗೆ ವಿದ್ಯುತ್ ಸಂಪರ್ಕ ನೀಡುವ ಲೈಸೆನ್ಸ್, 1925ರಲ್ಲಿ ಬಳ್ಳಾರಿ ಜೈಲಿಗೆ ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಸಿದ್ದಪಡಿಸಲಾದ ನೀಲನಕ್ಷೆ ನೋಡಲು ಸಿಗುತ್ತವೆ.
ಮೈಸೂರಿನ ಮಹಾರಾಜರಾಗಿದ್ದ ಶ್ರೀಕೃಷ್ಣರಾಜೇಂದ್ರ ಒಡೆಯರ್ ಅವರು 1927ರಲ್ಲಿ ತಮ್ಮ 25ನೇ ಅಧಿಕಾರಾವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಕನ್ನಡ, ಆಂಗ್ಲ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ನಾಡಿನ ಜನತೆಗೆ ನೀಡಿದ ಧನ್ಯವಾದ ಸಂದೇಶ, ಭಾರತರತ್ನ ಸರ್. ಎಂ.ವಿಶ್ವೇಶ್ವರಯ್ಯನವರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ 1909ರಲ್ಲಿ ಆಗಿನ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ನೀಡಿದ ನೇಮಕಾತಿ ಆದೇಶ ಆಕರ್ಷಣೆಯ ಕೇಂದ್ರಬಿಂದುವಾಗಿವೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿ 1927ರಲ್ಲಿ ಮಿರ್ಜಾ ಇಸ್ಮಾಯಿಲ್ರಿಗೆ ಬರೆದ ಸ್ವ ಹಸ್ತಾಕ್ಷರದ ಪತ್ರ, 1938ರಲ್ಲಿ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವದೇಶಿ ಚಿಂತನೆ, ಸರಾಯಿ ನಿಷೇಧಕ್ಕೆ ಮಹಿಳೆಯರು ಮುಂದಾಗಿದ್ದು, ಇವೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಆಡಳಿತ ನಡೆಸಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಆಂಗ್ಲ ಭಾಷೆಯ ಜೊತೆಗೆ ಕನ್ನಡ ಭಾಷೆ ತಿಳಿದಿದ್ದ ಹಲವಾರು ಬ್ರಿಟಿಷ್ ಅಧಿಕಾರಿಗಳ ಕುರಿತ ಮಾಹಿತಿ, 1929ರಲ್ಲಿ ಶಿವಮೊಗ್ಗದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕನ್ನೇಶ್ವರರಾಮನು ಸಲ್ಲಿಸಿದ್ದ ಮನವಿಗಳನ್ನು ಜನ ಕಣ್ಣರಳಿಸಿಕೊಂಡು ನೋಡುತ್ತಿದ್ದಾರೆ.
1939ರಲ್ಲಿ ಮಿಲಿಟರಿಯಿಂದ ಬಾಕಿ ಬರಬೇಕಾಗಿದ್ದ 94,929 ರುಪಾಯಿಗಳ ಬಾಕಿ ಪಾವತಿಗೆ ಗವರ್ನರ್ ಅವರು ಬಳ್ಳಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಪಿಸಲು ಸಿದ್ಧಪಡಿಸಿದ್ದ ಮನವಿ ಪತ್ರ, 1932ರಲ್ಲಿ ಕರ್ನಾಟಕ ಕೇಸರಿ ಪತ್ರಿಕೆಯಲ್ಲಿ ಕಿರ್ಲೋಸ್ಕರ್ ಕಂಪನಿಯು ನೇಗಿಲು ಖರೀದಿಸುವ ಕುರಿತು ಪ್ರಕಟಿಸಿರುವ ಜಾಹೀರಾತು ನಿಜಕ್ಕೂ ಅತ್ಯಾಕರ್ಷಕವಾಗಿವೆ.
1866ರಲ್ಲಿ ಮೈಸೂರು ಗೆಜೆಟ್ನಲ್ಲಿ ಪ್ರಕಟಿಸಿರುವ ಆಹಾರ ದಿನಿಸುಗಳ ಧಾರಣೆ ನಿಜಕ್ಕೂ ಆಶ್ಚರ್ಯ ಮೂಡಿಸುವಂತಹದಾಗಿದ್ದು, ಆಗಿನ ಪ್ರತಿ ಮಣ ತೂಕಕ್ಕೆ ಇದ್ದ ದಿನಿಸುಗಳ ದರಕ್ಕೂ ಈಗಿನ ದರಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ವಿಸ್ಮಯ ಮೂಡಿಸುತ್ತದೆ. ಕೊಬ್ಬರಿ- ರುಪಾಯಿ 3, ಧನಿಯಾ ರುಪಾಯಿ 2, ಅರಿಶಿಣ, ಹುಣಿಸೇಹಣ್ಣು ರುಪಾಯಿ 1, ತುಪ್ಪ ರುಪಾಯಿ 11 ಈ ರೀತಿಯ ದರಗಳನ್ನು ಹೊಂದಿರುವ ಗೆಜೆಟ್ ಅನ್ನು ನೋಡಿದವರು ಇಂದಿನ ಮಾರುಕಟ್ಟೆಯ ದರಗಳನ್ನು ನೋಡಿ ಬೆವರುಬಿಡುತ್ತಿದ್ದಾರೆ. [ಹಂಪಿ ಉತ್ಸವ]