ಜ. 27ರಿಂದ ವಿಜೃಂಭಣೆಯ ಹಂಪಿ ಉತ್ಸವ
ಗುರುವಾರ ಬೆಳಿಗ್ಗೆ 10 ಗಂಟೆಗೆ ಗ್ರಾಮೀಣ ಕ್ರೀಡಾ ಮತ್ತು ರಂಗೋಲಿ ಸ್ಪರ್ಧೆ ಕಾರ್ಯಕ್ರಮವನ್ನು ವಿರೂಪಾಕ್ಷ ದೇವಾಲಯದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಮಂಜಮ್ಮ ಅವರು ಉದ್ಫಾಟಿಸಲಿದ್ದಾರೆ.
ಅಕ್ಕ-ತಂಗಿಯರ ಗುಡ್ಡದ ಬಳಿ ಅಂದು ಬೆಳಿಗ್ಗೆ 10.30ಗಂಟೆಗೆ ವಿಧಾನಸಭಾ ಸದಸ್ಯರಾದ ಜಿ. ಸೋಮಶೇಖರ್ ರೆಡ್ಡಿ, ಸಾಹಸ ಕ್ರೀಡಾ ಕೂಟವನ್ನು ಉದ್ಫಾಟಿಲಿದ್ದಾರೆ. ಅದೇ ದಿನ 11 ಗಂಟೆಗೆ ರಾಣಿಯರ ಸ್ನಾನಗೃಹದ ಬಳಿ ವಸ್ತು ಪ್ರದರ್ಶನ ಉದ್ಫಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ರಮೇಶ್ ಬಿ. ಝಳಕಿ ಅವರು ನೆರವೇರಿಸಲಿದ್ದಾರೆ.
ಚಿತ್ರ ಹಾಗೂ ಶಿಲ್ಪಕಲಾ ಉದ್ಫಾಟನೆಯನ್ನು ಡಾ ಎ. ಮುರಿಗೆಪ್ಪ, ಕನ್ನಡ ವಿಶ್ವವಿದ್ಯಾಲಯ, ಹಂಪಿ ನೆರವೇರಿಸಲಿದ್ದಾರೆ. ಪುಸ್ತಕ ಮಳಿಗೆಗಳ ಉದ್ಫಾಟನೆಯನ್ನು ಅಂದು 11.30 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಅವರು ನೆರವೇರಿಸಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಅಲೆಮಾರಿ ಕಲಾವಿದರ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಮಧ್ಯಾಹ್ನ 3 ಗಂಟೆಗೆ ಹಿಂದ್ ಕೇಸರಿ ಚಂಬಾ ಮುತ್ನಾಳ್ ಅಖಾಡ ಬಳಿ ಕುಸ್ತಿ ಪಂದ್ಯಾವಳಿಯ ಉದ್ಫಾಟನೆಯನ್ನು ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಸಚಿವರಾದ ಜನಾರ್ಧನ ರೆಡ್ಡಿ ಅವರು ನೆರವೇರಿಸಲಿರುವ ಈ ಸಮಾರಂಭದಲ್ಲಿ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರು ಸೇರಿದಂತೆ ಶಾಸಕರುಗಳು ಮತ್ತು ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜನವರಿ 27 ರಂದು ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಜರುಗುವ ಸಮಾರೋಪ ಸಮಾರಂಭದಲ್ಲಿ ಲೋಕಸಭಾ ಸದಸ್ಯರಾದ ಅನಂತ್ಕುಮಾರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ವಿಧಾನಸಭಾ ಸದಸ್ಯ ಆನಂದ ಸಿಂಗ್ ಅವರು ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಸಚಿವರುಗಳಾದ ಬಿ. ಶ್ರೀರಾಮುಲು, ಜಿ. ಕರುಣಾಕರ ರೆಡ್ಡಿ, ಮತ್ತಿತರ ಸ್ಥಳೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಉತ್ಸವವನ್ನು ವಾರ್ತಾ ಇಲಾಖೆ, ಪ್ರಾಚ್ಯವಸ್ತು ಇಲಾಖೆ, ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ರಾಜ್ಯ ಪತ್ರಾಗಾರ ಇಲಾಖೆ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ರಾಜ್ಯದ ವಿವಿಧ ಅಕಾಡೆಮಿಗಳು, ಭಾರತೀಯ ಸಾಂಸ್ಕೃತಿಕ ಪರಿಷತ್ ಮತ್ತು ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದೆ. [ಹಂಪಿ]