ರಾಜ್ಯಪಾಲರನ್ನು ವಾಪಸ್ ಕರೆಸಲು ರಾಷ್ಟ್ರಪತಿಗೆ ಆಗ್ರಹ
ಭೂ ಹಗರಣ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ 15 ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ ಮೇಲೆ ರಾಜ್ಯದಲ್ಲಿ ಹೊತ್ತಿಕೊಂಡ ಹೊಗೆ ಈಗ ನವದೆಹಲಿ ತಲುಪಿ, ರಾಷ್ಟ್ರಪತಿ ಅಂಗಳವನ್ನೂ ತಲುಪಿದೆ.
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರುಗಳಾದ ಲಾಲ್ ಕೃಷ್ಣ ಅಡ್ವಾಣಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ ಮತ್ತಿತರ ನಾಯಕರು, ಕರ್ನಾಟಕದ ಸಂಸದರು ಮತ್ತು ಬಿಎಸ್ ಯಡಿಯೂರಪ್ಪ ಅವರೊಡಗೂಡಿ ಹಂಸರಾಜ್ ಅವರ ವಿರುದ್ಧ ದೂರು ಸಲ್ಲಿಸಿದರು.
ವಿಡಿಯೋ : ರಾಜ್ಯಪಾಲರ ಕಿತ್ತೊಗೆಯಲು ಬಿಜೆಪಿ ಆಗ್ರಹ
ಹಂಸರಾಜ್ ಭಾರದ್ವಾಜ್ ಅವರು ರಾಜ್ಯಪಾಲ ಹುದ್ದೆಯಲ್ಲಿರುವುದೇ ಅವಮಾನ. ಅವರೆಂದೂ ಸಂವಿಧಾನಕ್ಕೆ ಬದ್ಧರಾಗಿ ವರ್ತಿಸಿಲ್ಲ. ಕಾಂಗ್ರೆಸ್ ಪಕ್ಷಪಾತಿಯಂತೆ ವರ್ತಿಸಿ ಕರ್ನಾಟಕಕ್ಕೆ ಭಾರವಾಗಿರುವ ಭಾರದ್ವಾಜ್ ಅವರನ್ನು ಕೂಡಲೆ ವಾಪಸ್ ಕರೆಸಿಕೊಳ್ಳಬೇಕು ಎಂದು ಲಾಲ್ ಕೃಷ್ಣ ಅಡ್ವಾಣಿ ಅವರು ಪ್ರತಿಭಾ ಪಾಟೀಲ್ ಅವರನ್ನು ಕೋರಿದ್ದಾರೆ.
ವೆಂಕಯ್ಯ ನಾಯ್ಡು ಅವರು ಕೂಡ ಹಂಸರಾಜ್ ಭಾರದ್ವಾಜ್ ಅವರ ಕಾರ್ಯ ವೈಖರಿಯನ್ನು, ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರಲ್ಲದೆ ಹಂಸರಾಜ್ ಅವರು ಮೊದಲಿನಿಂದಲೂ ಕಾಂಗ್ರೆಸ್ ನ ದಾಳವಾಗಿ ಆಡಳಿತ ನಡೆಸುತ್ತಿದ್ದಾರೆ. ಅಭಿವೃದ್ಧಿಯನ್ನು ಸಹಿಸದೆ ಬಿಜೆಪಿ ಸರಕಾರವನ್ನು ಕೆಳಗಿಳಿಸುವ ಏಕೈಕ ಉದ್ದೇಶದಿಂದ ನಿಮಯ ಮೀರಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರು ರಾಷ್ಟ್ರಪತಿಯನ್ನು ಭೇಟಿ ಮಾಡಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಆಗ್ರಹಿಸಿರುವುದು ಕಾಂಗ್ರೆಸ್ ಮೇಲೆ ಒತ್ತಡ ಹೇರುವ ತಂತ್ರದ ಒಂದು ಭಾಗವಾಗಿದೆಯಷ್ಟೆ. ಕಾಂಗ್ರೆಸ್ ನ ರಬ್ಬರ್ ಸ್ಟಾಂಪ್ ಆಗಿರುವ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿರುವುದು ಕಾಂಗ್ರೆಸ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. [ಯಡಿಯೂರಪ್ಪ]