ಧ್ವಜಾರೋಹಣಕ್ಕೆ ಹೊರಟವರಿಗೆ ಮಧ್ಯದಲ್ಲೇ ಕೆಂಪು ಬಾವುಟ
ಯುವಮೋರ್ಚಾ ನಾಯಕ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಸುಮಾರು 2000 ಕಾರ್ಯಕರ್ತರು ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಜಮ್ಮುವಿಗೆ ತೆರಳುತ್ತಿದ್ದರು. ಕಾರ್ಯಕರ್ತರೆಲ್ಲ ಗಾಢ ನಿದ್ರೆಯಲ್ಲಿದ್ದಾಗ ಮಧ್ಯರಾತ್ರಿ 1.30ರ ಸುಮಾರಿಗೆ ಅವರಿದ್ದ ಬೋಗಿ ಕಳಚಿ ಬೆಂಗಳೂರಿಗೆ ಮರಳುತ್ತಿದ್ದ ರೈಲಿನೊಂದಿಗೆ ಜೋಡಿಸಿ ವಾಪಸ್ ಕಳಿಸಲಾಗಿದೆ.
ಬಿಜೆಪಿಯ ಅಭಿಯಾನವನ್ನು ಮಹಾರಾಷ್ಟ್ರದ ಅಹ್ಮದ್ ನಗರದ ನಿಲ್ದಾಣದಲ್ಲಿ ಕತ್ತರಿಸಲಾಗಿದ್ದು, ಸೊಲ್ಲಾಪುರದ ಅಕ್ಕಲಕೋಟೆ ಬಳಿ ರೈಲು ಇಂದು ಬೆಳಿಗ್ಗೆ ಬಂದಾಗಲೇ ಏನಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿದಿದೆ. ಸದ್ಯಕ್ಕೆ ಗಾಣಗಾಪುರದಲ್ಲಿ ನಿಂತಿರುವ ರೈಲು ಬೆಂಗಳೂರಿಗೆ ವಾಪಸ್ ಬರುತ್ತಿದೆ.
ಭಾರೀ ಪ್ರತಿಭಟನೆ : ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದು, ಗಾಣಗಾಪುರದ ರೈಲು ನಿಲ್ದಾಣದಲ್ಲಿ ದಾಂಧಲೆಗೆ ಇಳಿದಿದ್ದಾರೆ. ಅಲ್ಲಿನ ರೈಲು ನಿಲ್ದಾಣದ ಗಾಜುಗಳು ಪುಡಿಪುಡಿ ಮಾಡಲಾಗಿದೆ. ಗುಲಬರ್ಗಾದಲ್ಲಿ ಕೂಡ ಬಿಜೆಪಿ ಬೆಂಬಲಿಗರು ಸೇರಿದ್ದು, ಹಿಂಸಾಚಾರ ನಡೆಯುವ ಸಾಧ್ಯಗಳಿರುವುದರಿಂದ ಗುಲಬರ್ಗಾದಲ್ಲಿ ರೈಲು ನಿಲ್ಲಿಸದೆ ಓಡಿಸಲಾಗುವುದೆಂದು ತಿಳಿದುಬಂದಿದೆ.
ಯಡಿಯೂರಪ್ಪ ಆಕ್ರೋಶ : ಇಂದು ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಹಾರಾಷ್ಟ್ರ ಸರಕಾರ ಬಿಜೆಪಿ ಕಾರ್ಯಕರ್ತರನ್ನು ವಾಪಸ್ ಕಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಧ್ವಜ ಹಾರಿಸುವ ಹಕ್ಕು ಪ್ರತಿ ಭಾರತೀಯನಿಗೂ ಇದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಪ್ರತಿರೋಧವನ್ನು ಪ್ರಧಾನಿಗೂ ತಲುಪಿಸುವುದಾಗಿ ಅವರು ನುಡಿದರು. [ರಾಷ್ಟ್ರಧ್ವಜ]