ರಾಜ್ಯಪಾಲರು ಹಂಸರಾಜ್ ಅಲ್ಲ ಕಂಸರಾಜ್!
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಚಾರಿತ್ರ್ಯಹೀನ ರಾಜ್ಯಪಾಲರು. ಬಿಜೆಪಿ ಸರಕಾರವನ್ನು ಬೀಳಿಸುವ ಉದ್ದೇಶದಿಂದಲೇ ಕಾಂಗ್ರೆಸ್ ಜೊತೆಗೂಡಿ ಷಡ್ಯಂತ್ರ ನಡೆಸುತ್ತಿದ್ದಾರೆ. ಅವರ ಯತ್ನಕ್ಕೆ ಖಂಡಿತ ಜಯ ಸಿಗದು ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಹಂಸರಾಜ್ ಅಲ್ಲ, ಕಂಸರಾಜ್ : ರಾಜ್ಯಪಾಲ ಎಚ್.ಆರ್. ಭಾರದ್ವಜ್ ಅವರು ಹಂಸರಾಜ್ ಅಲ್ಲ, ಕಂಸರಾಜ್' ಎಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಟೀಕಿಸಿದರು. ಇತಿಹಾಸದಲ್ಲಿ ಕಂಸರಾಜನಿಗೆ ಆದ ಗತಿಯೇ ಹಂಸರಾಜ್ ಅವರಿಗೂ ಆಗಲಿದೆ. ಇದೇ ಫಲಿತಾಂಶ ಕಾಂಗ್ರೆಸ್ಗೂ ಸಿಗಲಿದೆ ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯಪಾಲರನ್ನು ಕಂಸ ಎಂದು ಜರಿದಿರುವ ಜನಾರ್ದನ ರೆಡ್ಡಿ ಅವರು, ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದು ಭಿನ್ನಮತೀಯರನ್ನು ಹೈದರಾಬಾದಿನಲ್ಲಿ ಕೂಡಿಹಾಕಿದ್ದ ಸಮಯದಲ್ಲಿ ಇದೇ ಯಡಿಯೂರಪ್ಪನವರನ್ನು ಕಂಸ ಎಂದು 'ಕೊಂಡಾಡಿದ್ದರು'.
ರಾಜ್ಯಪಾಲ ಎಚ್.ಆರ್. ಭಾರಧ್ವಜ್ ಅವರು ಕರ್ನಾಟಕಕ್ಕೆ ಬಂದಾಗಿನಿಂದಲೂ ಒನ್ ಸೈಡೆಡ್ ಆಗಿದ್ದಾರೆ. ಅವರ ಮಾತು, ಭಾಷೆ, ಯೋಚನಾ ದಿಕ್ಕುಗಳು ಎಲ್ಲವೂ ಒಂದು ಪಕ್ಷದ ಪರವಾಗಿವೆ. ಜನತೆ ರಾಜ್ಯಪಾಲರ ಈ ಎಲ್ಲಾ ನಡವಳಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಜನರಿಂದ ಸಂಪೂರ್ಣ ನಿರ್ಣಾಮಗೊಳ್ಳಲಿದೆ. ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷವನ್ನೇ ಟಾರ್ಗೆಟ್ ಮಾಡಿ ಕಾಂಗ್ರೆಸ್ಸಿಗರು ರಾಜ್ಯಪಾಲರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆ ಕುರಿತು ಪ್ರಶ್ನಿಸಿದಾಗ, ನಾಯಕತ್ವ ಪಕ್ಷದ ಆಂತರಿಕ ವಿಚಾರ. ಕಳೆದ ಚುನಾವಣೆಗಳನ್ನು ಬಿಎಸ್ವೈ ಯಕತ್ವದಲ್ಲೇ ನಡೆಸಿ, ಅಧಿಕಾರಕ್ಕೆ ಬಂದಿದ್ದೇವೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷಕ್ಕೇ ನಷ್ಟವಾಗಲಿದೆ ಎಂದು ಹೇಳಿದರು. [ಯಡಿಯೂರಪ್ಪ]