ರಾಜ್ಯಪಾಲರ ವಿರುದ್ಧ ಸಿಎಂ ಗಂಭೀರ ಆರೋಪ!
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿರುವ ಚುನಾಯಿತ ಸರಕಾರಕ್ಕೆ ಕಳ್ಳ ಎಂದು ಟೀಕೆ ಮಾಡುವ ಮೂಲಕ ರಾಜ್ಯಪಾಲರು ಕನ್ನಡಿಗರನ್ನು ಅವಮಾನಿಸಿದ್ದಾರೆ. ಹೀಗಾಗಿ ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಳೆ 12 ಗಂಟೆಗೆ ತುರ್ತು ಸಚಿವ ಸಂಪುಟ ಕರೆಯಲಾಗಿದೆ. ಪ್ರಸ್ತುತ ಘಟನೆಗಳ ಸವಿವರವಾಗಿ ಚರ್ಚೆ ನಡೆಸಲಾಗುವುದು. ಮುಖ್ಯವಾಗಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಇನ್ನೊಂದಡೆ ರಾಜ್ಯಪಾಲರ ಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೋರ್ ಕಮೀಟಿ ಆರಂಭವಾಗಿದ್ದು, ರಾಜ್ಯಪಾಲರ ವಿರುದ್ಧ ಹೋರಾಟ ನಡೆಸಲು ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಒಂದು ವೇಳೆ ರಾಜ್ಯಪಾಲರು ಸಿಎಂ ವಿರುದ್ಧ ಮೊಕದ್ದಮೆ ದಾಖಲಿಸಿದರೆ, ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ. ರಾಜೀನಾಮೆ ಸಂಗತಿ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ. ಹೀಗಾಗಿ ಗವರ್ನರ್ ವಿರುದ್ಧ ಹೋರಾಟ ನಡೆಸಲು ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ತಯಾರಿ ನಡೆಸಿದೆ.