ಸರಕಾರಕ್ಕೆ ಕೇಳುವುದೆ ತಿಮ್ಮಕ್ಕನ ಮೊರೆ?
90ರ ಇಳಿವಯಸ್ಸಿನ ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಮುಂತಾದ ಪ್ರಶಸ್ತಿ ಪಡೆದಿರುವ 'ನಾಡೋಜ' ಸಾಲುಮರದ ತಿಮ್ಮಕ್ಕ ಈಡೇರಿಸದೇ ಇರುವ ತಮ್ಮ ಕೆಲ ಬೇಡಿಕೆಗಳನ್ನು ಆಗ್ರಹಿಸಿ ಇಂದು ಗಾಂಧಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿರುಬಿಸಿಲಿನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಅವರ ಬೇಡಿಕೆಗಳು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ತಮಗೆ ಬದುಕು ಸಾಗಿಸಲು ಜೀವನಾಂಶ ನೀಡಬೇಕು. ಬೆಂಗಳೂರಿನಲ್ಲಿ ನೆಲೆಸಲೊಂದು ನಿವೇಶನ ಕೊಡಬೇಕು.
ಹುಲಿಕಲ್ ನಲ್ಲಿ ಆಸ್ಪತ್ರೆ ಮತ್ತು ಬದುಕಿನ ಬಂಡಿ ಸಾಗಲು ತಿಂಗಳಿಗೆ ಹತ್ತು ಸಾವಿರ ರು. ನೀಡಬೇಕೆಂದು ತಿಮ್ಮಕ್ಕ ಹಿಂದೆಯೇ ಆಗ್ರಹಿಸಿದ್ದರು. ನಮ್ಮಂಥ ಬಡಬಗ್ಗರನ್ನು ಸರಕಾರ ಕಾಪಾಡಲಿ. ಜೀವನಾಂಶಕ್ಕೆ ಹಣ ಕೊಡಿ, ಕೆಲಸ ಕೊಟ್ಟು ಕಾಪಾಡಲಿ ಎಂದು ತಿಮ್ಮಕ್ಕ ಸರಕಾರಕ್ಕೆ ಕೇಳಿಕೊಂಡಿದ್ದಾರೆ. ಕೆಲ ಸವಲತ್ತುಗಳನ್ನು ಕೂಡ ರಾಜ್ಯ ಸರಕಾರ ನೀಡಿದೆ.
ಹುಲಿಕಲ್ ನಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ನಾಲ್ಕು ಕಿ.ಮೀ. ಉದ್ದಕ್ಕೂ 300ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿ, ಮಕ್ಕಳಂತೆ ಬೆಳೆಸಿ, ಜನತೆಗೆ ನೆರಳಾದ ತಿಮ್ಮಕ್ಕ ಅವರ ಮೇಲಿನ ಬೇಡಿಕೆಗಳನ್ನು ಸರಕಾರ ಈಡೇರಿಸುವುದೆ? ಸಂಕಷ್ಟದ ದಿನಗಳಲ್ಲಿ ಅವರಿಗೆ ಆಸರೆಯಾಗುವುದೆ? [ಸಾಲುಮರದ ತಿಮ್ಮಕ್ಕ]