ಕುಟುಂಬ ಸಮೇತರಾಗಿ ಎಚ್ಡಿಕೆ ವಿಶ್ವಪರ್ಯಟನ
ಕ್ರಾಂತಿ ಮಾಡಲು ಹೊರಟಿದ್ದ ತೆನೆಹೊತ್ತ ಮಹಿಳೆಯ ನೇತಾರರೇ ದೇಶದಿಂದ ನಾಪತ್ತೆಯಾಗಿದ್ದಾರೆ. ಸಂಕ್ರಾಂತಿಯ ನಂತರ ಕರ್ನಾಟಕ ರಾಜಕೀಯದಲ್ಲಿ ಹೊಸಶಕೆ ಆರಂಭವಾಗಲಿದೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಗೊತ್ತಿಲ್ಲದ ಯಡಿಯೂರಪ್ಪ ಅವರ ಸರಕಾರ ಕೆಳಗಿಳಿಯಲಿದೆ. ಅವರು ಮಾಡಿದ್ದ ಇನ್ನಷ್ಟು ಹಗರಣಗಳು ದಾಖಲೆ ಸಮೇತ ಬಯಲಾಗಲಿವೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಎಲ್ಲಿದ್ದೀರಾ?
ಸಂಕ್ರಾಂತಿ ಸಮಯದಲ್ಲಿ ಸುಗ್ಗಿಯ ಹುಗ್ಗಿಯಿರಲಿ ಎಳ್ಳುಬೆಲ್ಲ ಕೂಡ ಬೀರದೆ ನಾಪತ್ತೆಯಾಗಿದ್ದಾರೆ ಎಂದು ತೆನೆಹೊತ್ತ ಮಹಿಳೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಹಾಗಿದ್ರೆ, ರಾಜಕೀಯ ಬದಲಾವಣೆಯ ಹರಿಕಾರ ಕುಮಾರಸ್ವಾಮಿ ಅವರು ಸದ್ಯಕ್ಕೆ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಯಾರೊಂದಿಗಿದ್ದಾರೆ?
ನಂಬಲರ್ಹ ಮಾಹಿತಿಯ ಪ್ರಕಾರ, ಶ್ರೀಮಾನ್ ಕುಮಾರಸ್ವಾಮಿಯವರು ತಮ್ಮ 'ಶ್ರೀಮತಿ'ಯವರೊಂದಿಗೆ 'ಕುಟುಂಬ' ಸಮೇತರಾಗಿ ಹಾಯಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಸಂಕ್ರಾಂತಿಯಂದೇ ಬೆಂಗಳೂರಿನಿಂದ ಚುಮುಚುಮು ಚಳಿಯಲ್ಲಿ ವಿಮಾನವೇರಿದ ಸ್ವಾಮಿಯವರು ನೇರವಾಗಿ ಲಂಡನ್ ತಲುಪಿದ್ದಾರೆ. ಇನ್ ಫ್ಯಾಕ್ಟ್, ಹಂತಕರ ಮಚ್ಚಿಗೆ ಬಲಿಯಾದ ದಿವಾನ್ ಅಲಿ ಪರವಾಗಿ ಕುಮಾರಸ್ವಾಮಿ ಶೋಕ ಸಂದೇಶ ಕಳಿಸಿದ್ದೇ ಲಂಡನ್ ನಿಂದ.
ಅಲ್ಲಿಂದ ಅವರು ಸದ್ಯಕ್ಕೆ ದುಬೈನ ಮರಳುಗಾಡಿನಲ್ಲಿ ರಾಜಕೀಯ ಜಂಜಾಟಗಳನ್ನೆಲ್ಲ ಮರೆತು ಸಂಸಾರ ಸುಖದಲ್ಲಿ ತೇಲಾಡುತ್ತಿದ್ದಾರೆ ಎಂಬ ಮಾತು ಕೂಡ ವಿಧಾನಸೌಧದ ಗೋಡೆಯಿಂದ ಪ್ರತಿಧ್ವನಿಸಿದೆ. ಜನೆವರಿ 21ರ ಸುಮಾರಿಗೆ ಅವರು ಬೆಂಗಳೂರಿಗೆ ಮರಳಲಿದ್ದಾರೆ ಎಂದು ನಂಬಲರ್ಹ ಮಾಹಿತಿಯಿಂದ ತಿಳಿದುಬಂದಿದೆ. ಫೆಬ್ರವರಿ 10ರಂದು ರಥಸಪ್ತಮಿಯಂದು ಸೂರ್ಯ ತನ್ನ ಪಥವನ್ನು ಬದಲಿಸಲಿದ್ದಾನೆ. ಕರ್ನಾಟಕ ರಾಜಕೀಯ ದಿಕ್ಕೂ ಬದಲಾಗಲಿದೆಯೆ? ಎನಿ ವಿಚ್ ವೇ, ಹ್ಯಾಪಿ ಹಾಲಿಡೇಸ್ ಕುಮಾರಸ್ವಾಮಿ ಎಂಡ್ ಫ್ಯಾಮಿಲಿ. [ಕುಮಾರಸ್ವಾಮಿ]