ಸಾಲುಕೊಪ್ಪಲೆಂಬ ಶೀತಪೀಡಿತ ಗ್ರಾಮ
ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡಿದವರಿಗೆ ತಂಪು ಹವೆ ಒಂದಷ್ಟು ಮಜಾ ನೀಡಿದರೆ, ಗ್ರಾಮಸ್ಥರಿಗೆ ಮಾತ್ರ ಶಾಪವಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನೀರು... ಚಳಿಗಾಲದಲ್ಲಿ ಮೈಕೊರೆಯುವ ಚಳಿ... ಇದರ ನಡುವೆ ಸದಾ ತೇವದ ಭೂಮಿಯಲ್ಲಿ ಯಾವುದೇ ಕೃಷಿ ಮಾಡಲಾಗದ ದುಸ್ಥಿತಿ.
ಈ ಕುಟುಂಬಗಳಿಗೆ ಯಾರು ದಿಕ್ಕು?:ಹೀಗಿದ್ದರೂ ಈ ಗ್ರಾಮದಲ್ಲಿ ಸುಮಾರು 27 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಂಡಿವೆ. ಮೊದಲೆಲ್ಲಾ ಈ ಗ್ರಾಮವೂ ಎಲ್ಲಾ ಗ್ರಾಮಗಳಂತೆ ಇತ್ತು. ಇಲ್ಲಿನ ಜಮೀನುಗಳು ಫಲವತ್ತಾಗಿದ್ದವು. ರೈತರು ಕೃಷಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಆದರೆ ಹಾರಂಗಿ ಜಲಾಶಯ ನಿರ್ಮಾಣಗೊಂಡ ಬಳಿಕ ಇಲ್ಲಿ ಸಮಸ್ಯೆ ಪ್ರಾರಂಭವಾಯಿತು. ಗ್ರಾಮ ಶೀತದಲ್ಲಿ ಮುಳುಗಿತು.
ಆರ್ಥಿಕವಾಗಿ ಸಬಲರಾಗಿದ್ದವರು ಗ್ರಾಮವನ್ನು ತೊರೆದು ಬೇರೆಡೆಗೆ ಹೋದರಾದರೂ, ಕೆಲವರು ಅಸಹಾಯಕರಾಗಿ ಇಲ್ಲಿಯೇ ಉಳಿದಿದ್ದಾರೆ. ಇವರನ್ನು ಪುನರ್ವಸತಿಗೊಳಿಸುವುದಾಗಲೀ, ಗ್ರಾಮವನ್ನು ಶೀತಮುಕ್ತಗೊಳಿಸಲು ವೈಜ್ಞಾನಿಕ ಕ್ರಮಗಳನ್ನು ಸರ್ಕಾರ ಕೈಗೊಳ್ಳದೇ ಇರುವುದರಿಂದ ಈ ಗ್ರಾಮದ ಜನ ಇನ್ನೂ ಸಮಸ್ಯೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ.
1984ರಲ್ಲಿ ಸಾಲುಕೊಪ್ಪಲು ಗ್ರಾಮದ ನಿವಾಸಿಗಳ ಪುನರ್ವಸತಿಗಾಗಿ ಸರ್ಕಾರ ಸಮಿತಿ ರಚಿಸಿತ್ತು. ಈ ಸಮಿತಿಯು ಮಣಜೂರು ಗ್ರಾಮದಲ್ಲಿ ಜಾಗವನ್ನು ಗುರುತಿಸಿ ಅಲ್ಲಿಗೆ ಸಾಲುಕೊಪ್ಪಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಚಿಂತನೆ ನಡೆಸಿತ್ತು. ಇದರ ಫಲವಾಗಿ 1990ಲ್ಲಿ ಮಣಜೂರು ಗ್ರಾಮದಲ್ಲಿ 5.85 ಎಕರೆ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡು ನಿವೇಶನವಾಗಿ ಪರಿವರ್ತಿಸುವ ಮೂಲಕ ಹುಣಸೂರಿನ ಭೂಸ್ವಾಧೀನ ಇಲಾಖೆಯು ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರ ಮಾಡಿತ್ತು.
ಕ್ಯಾರೆ ಎನ್ನದ ಅಧಿಕಾರಿಗಳು: ಕಾವೇರಿ ನೀರಾವರಿ ನಿಗಮವು ಪುನರ್ವಸತಿ ಕಾರ್ಯದ ಬಗ್ಗೆ ಕರಡು ತಯಾರಿಸಿ 1.20 ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿತು. ಆದರೆ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ನೆನೆಗುದಿಗೆ ಬಿತ್ತು.
ಇದೀಗ ಮತ್ತೆ ಸಾಲುಕೊಪ್ಪಲನ್ನು ಶೀತ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗಿದ್ದು, ಜನವರಿ ತಿಂಗಳೊಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇದು ಕೂಡ ಜಾರಿಗೆ ಬರುತ್ತಾ ಇಲ್ಲ ನೆನೆಗುದಿಗೆ ಬೀಳುತ್ತಾ ಕಾದು ನೋಡಬೇಕು. [ಕೊಡಗು]