ಫೆ.10ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ
ರಾಷ್ಟ್ರೀಯ ಭಾವೈಕ್ಯತೆ, ವಿಶ್ವ ಭ್ರಾತೃತ್ವ ಮತ್ತು ಸರ್ವಧರ್ಮ ಸೌಹಾರ್ದತೆ ಸಾಧಿಸುವ ನಿಟ್ಟಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವು ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಫೆಬ್ರವರಿ 10 ರಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ತರಳಬಾಳು ಮಹೋತ್ಸವದ ಮಹಾಮಂಟಪದ ವೇದಿಕೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತರಳಬಾಳು ಹುಣ್ಣಿಮೆ ಮೂಲಪುರುಷ ವಿಶ್ವಬಂಧು ಮರುಳಸಿದ್ಧ ಜನ್ಮತಃ ಹರಿಜನನಾಗಿದ್ದು, 12 ನೇ ಶತಮಾನದಲ್ಲಿ ಶೋಷಣೆ, ಮೂಡನಂಬಿಕೆಗಳ ವಿರುದ್ಧ ಬಂಡೆದ್ದವನು. ಅವನ ಶಿಷ್ಯ ತೆಲುಗುಬಾಳು ಸಿದ್ದಯ್ಯನಿಗೆ ಹರಿಸಿದ ತರಳಾ ಬಾಳು ಎಂಬ ಮಂತ್ರದಲ್ಲಿ ನಾಡಿನ ತರಳರೆಲ್ಲರ ಬಾಳು ಹಸನಾಗಲಿ ಎಂಬ ಆಶಯವಿದೆ ಎಂದರು.
ಮಹಾಮಂಟಪದ ವೇದಿಕೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ತರಳಬಾಳು ಹುಣ್ಣಿಮೆ ಮಹೋತ್ಸವ ಕೇವಲ ಕಾರ್ಯಕ್ರಮವಲ್ಲ. ಸಮಾಜದ ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸುವ ವೇದಿಕೆ ಎಂದು ಹೇಳಿದರು. ಕರ್ನಾಟಕದ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ವೀರಶೈವ ಮಠಗಳ ಕೊಡುಗೆ ಅನನ್ಯ. ತರಳಬಾಳು ಬ್ರಹನ್ಮಠವು ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಆ ಮಹೋತ್ಸವ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಬಿದರಿ ಮನವಿ ಮಾಡಿಕೊಂಡರು.