ದ್ವಿಚಕ್ರವಾಹನ ಏರಿ ಬಳ್ಳಾರಿ ರೆಡ್ಡಿ ಗಸ್ತು
ಭಾನುವಾರ ಬೆಳಗ್ಗೆ ಎಲ್ಲರೂ ರಜಾ ಮೂಡಿನಲ್ಲಿರುತ್ತಾರೆ. ದಿನದ ಸಹಜಕ್ಕಿಂತಲೂ ಒಂದೆರೆಡು ತಾಸು ಹೆಚ್ಚಿನ ನಿದ್ರೆ ಮಾಡುವುದು ಅಥವಾ ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ ತೋರುವುದು ತೀರ ಸಹಜ. ಅದರಲ್ಲೂ ಮಾಗಿಯ ಛಳಿ ಇನ್ನೂ ಮುಗಿದಿಲ್ಲ, ಸಂಕ್ರಮಣದ ಬಿಸಿ ಬಳ್ಳಾರಿಗರಿಗೆ ತಾಕಿಲ್ಲ.
ಸಿಕ್ಕಾಪಟ್ಟೆ ಸುತ್ತಾಡಿದ ರೆಡ್ಡಿ: ಇಂಥ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಏಕಾಏಕಿ ನಗರ ಪ್ರದಕ್ಷಿಣೆ ಹಾಕಿದ್ದು ಅನೇಕರ ಛಳಿಯನ್ನು ಹಾಸಿಗೆಯಲ್ಲೇ ಒದ್ದು ಓಡಿಸಿದೆ. ಬಿಸಿಯನ್ನು ಹೊದ್ದು ಮಲಗಿದ್ದಲ್ಲೇ ಮೂಡಿಸಿದೆ. ಭಾನುವಾರ ಬೆಳಗ್ಗೆಯಿಂದಲೇ ತಮ್ಮ ಆಪ್ತರು, ಬೆಂಬಲಿಗರು ಹಾಗೂ ಸಿಬ್ಬಂದಿಯ ಜೊತೆ ಜೊತೆಯಲ್ಲೇ ಬೆಂಗಳೂರು ರಸ್ತೆ, ದೊಡ್ಡ ತರಕಾರಿ ಮಾರುಕಟ್ಟೆ, ಕೋರ್ಟ್ ಮಸೀದಿ ರಸ್ತೆ, ಗಡ್ಡೆ ಕೆಳಗಿನ ಏರಿಯಾ, ವಡ್ಡರಬಂಡೆ, ಸತ್ಯನಾರಾಯಣಪೇಟೆ 2ನೇ ಕ್ರಾಸ್, ಗೊಲ್ಲನರಸಪ್ಪ ಕಾಲೋನಿ, ಪಾರ್ವತಿನಗರ, ಮಿಲ್ಲಾರಪೇಟೆ, ಹನುಮಾನ ನಗರಗಳಲ್ಲಿ ವಿಸ್ತೃತವಾಗಿ ಸಂಚರಿಸಿದರು.
ಈ ಸಂಚಾರದಲ್ಲಿ ಶಾಸಕರು ಸುಮ್ಮನೆ ನಗರ ಸುತ್ತಲಿಲ್ಲ. ಅಲ್ಲಲ್ಲಿ ನಿಂತು, ಕಸವನ್ನು ಸಿಕ್ಕಾಪಟ್ಟೆ ಚೆಲ್ಲಾಪಿಲ್ಲಿಯಾಗಿ ಹಾಕುವ ಮೂಲಕ ಉಂಟಾಗುವ ವ್ಯಾಧಿಗಳು, ಹರಡುವ ವೈರಸ್ಗಳು ಮತ್ತು ಇನ್ನಿತರೆ ವಿಚಾರಗಳ ಕುರಿತು ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ನೀತಿ ಪಾಠ ಮಾಡಿದರು. ಅವರಲ್ಲಿ ಜಾಗೃತಿ ಮೂಡಿಸಿದರು.
ಅಷ್ಟೇ ಅಲ್ಲ, ಕಸ ವಿಲೇವಾರಿ ಕುರಿತು 10 ಪದವೀಧರರ ಮೂಲಕ ಜಾಗೃತಿ ಶಿಬಿರಗಳನ್ನು ನಡೆಸಲು ಪಾಲಿಕೆ ಮುಂದಾಗಿದೆ. 'ಸ್ವಚ್ಛ ಬಳ್ಳಾರಿ, ಸುಂದರ ಬಳ್ಳಾರಿ" ಯೋಜನೆ ಸಂಪೂರ್ಣ ಯಶಸ್ವಿ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಅಹರ್ನಿಷಿಯಾಗಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದರು. [ಬಳ್ಳಾರಿ]