ಶಿವಮೊಗ್ಗದಲ್ಲಿ ನೆಲೆ ನಿಂತ ಶ್ರೀ ಲಕ್ಷ್ಮೀನಾರಾಯಣ
ಭಕ್ತರೋರ್ವರಿಗೆ ದೇವರು ಕನಸಿನಲ್ಲಿ ಕಾಣಿಸಿಕೊಂಡು ಗದ್ದೆಯಲ್ಲಿ ಸಿಕ್ಕ ಈ ಸ್ವಾಮಿ ವಿಗ್ರಹವನ್ನು ತುಂಗಾನದಿ ತೀರದಲ್ಲಿ ಸ್ಥಾಪಿಸಬೇಕೆಂದು ಅಪ್ಪಣೆ ಕೊಡಿಸಿದರಂತೆ. ಅದರಂತೆ ಈ ಗುಡಿ ನಿರ್ಮಾಣವಾಯಿತೆಂದು ಹಿರಿಯರು ಹೇಳುತ್ತಾರೆ.
ಈ ದೇವಸ್ಥಾನದ ಮುಂಭಾಗದಲ್ಲಿ 40 ಅಡಿ ಎತ್ತರದ ಏಕ ಶಿಲೆಯಿಂದ ಮಾಡಲ್ಪಟ್ಟ ಗರುಡಗಂಬ ಗಮನ ಸೆಳೆಯುವಂತಹದ್ದಾಗಿದೆ. ಪುರಾತನ ಕಾಲದ ಈ ದೇವಸ್ಥಾನ ಕಾಲಾಂತರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. 1997ರಲ್ಲಿ ರಾಜಗೋಪುರ ನಿರ್ಮಿಸಲಾಯಿತು. ಕರ್ನಾಟಕ ಗೆಜೆಟಿಯರ್ನಲ್ಲಿ ದಾಖಲಾಗಿರುವ ಈ ದೇವಸ್ಥಾನ ಹೊಂದಿದ್ದ ಇನಾಮ್ ಜಮೀನು 1960ರ ಕಾಯ್ದೆಯಂತೆ ಕೈಬಿಟ್ಟು ಹೋಯಿತು. ಮುಜರಾಯಿ ಆಡಳಿತದಲ್ಲಿರುವ ಈ ದೇವಸ್ಥಾನದಲ್ಲಿ ನಡೆಯುವ ಅನ್ನದಾನವು ನಗರದ ವಿವಿಧೆಡೆ ನಡೆಯಲು ಪ್ರೇರಣೆಯಾಯಿತೆಂಬ ಮಾತಿದೆ.
ಶಿವಗಂಗಾ ಶ್ರೀಗಳು ಸುಮಾರು 15 ವರ್ಷಗಳ ಹಿಂದೆ ಇಲ್ಲಿ ಚಾತುರ್ಮಾಸ ಕೈಗೊಂಡಿದ್ದರು. ಇಲ್ಲಿ ಸುಮಾರು 100 ವರ್ಷಗಳಿಂದ ಶಂಕರ ಜಯಂತಿ ಹಾಗೂ ರಾಮೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ನವರಾತ್ರಿ ಉತ್ಸವ, ಚಂಡೀಹೋಮ, ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ, ಧನುರ್ಮಾಸ ಪೂಜೆ, ತ್ಯಾಗರಾಜ ಮತ್ತು ಪುರಂದರ ದಾಸರ ಜಯಂತಿ, ಪ್ರತಿತಿಂಗಳು ಸಂಕಷ್ಟ ಹರ ಚತುರ್ಥಿ ಶ್ರೀ ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಈ ಪುರಾತನ ಹಾಗೂ ಇಷ್ಟಾರ್ಥ ಸಿದ್ದಿಯ, ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯವನ್ನು ಆಡಳಿತ ಮಂಡಳಿ ಕೈಗೊಳ್ಳಲು ಮುಂದಾಗಿದೆ. ಈ ಪೂಜನೀಯ ಕಾರ್ಯದಲ್ಲಿ ಹಣ ಅಥವಾ ವಸ್ತು ರೂಪದಲ್ಲಿ ಸಾರ್ವಜನಿಕರು ಸಹಾಯ ಹಸ್ತ ನೀಡಬಹುದಾಗಿದೆ.
ಸುಮಾರು 1 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮತ್ತು ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ, ಯಾಗಶಾಲೆ, ಸಭಾಂಗಣ ಪಾಕಶಾಲೆ, ಭೋಜನ ಶಾಲೆ ಮುಂತಾದ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಬೃಹತ್ ಮೊತ್ತದ ಸಂಪನ್ಮೂಲ ಸಾರ್ವಜನಿಕರಿಂದ ಕ್ರೊಢೀಕರಣಕ್ಕಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿ ಯತ್ನಿಸುತ್ತಿದೆ. ಈ ಧಾರ್ಮಿಕ ಕಾರ್ಯದಲ್ಲಿ ಕೈಜೋಡಿಸಬಯಸುವ ಭಕ್ತರು ಪ್ರಧಾನ ಕಾರ್ಯದರ್ಶಿ ಅನಂತಶಾಸ್ತ್ರಿಯವರನ್ನು 98440 35446, ಖಜಾಂಚಿ ನಾಡಿಗ್ ಶ್ರೀಧರ್ರನ್ನ 99016 21977 ಮೊಬೈಲ್ ಸಂಪರ್ಕಿಸಬಹುದು ಎಂದು ಉಪಾಧ್ಯಕ್ಷ ಕೆ.ಎನ್. ದತ್ತಾತ್ರಿ ಹೇಳಿದ್ದಾರೆ.