ಬಳ್ಳಾರಿ : ಹೊಂಡಕ್ಕೆ ಬಿದ್ದು ಶಾಲಾ ಬಾಲಕನ ಸಾವು
ಬಳ್ಳಾರಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬರುವ ಬಂಡಿಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಅಶೋಕ್ (7) ಆ ದುರ್ದೈವಿ. ಗುರುವಾರ ಎಂದಿನಂತೆ ಶಾಲೆಗೆ ಆಗಮಿಸಿದ್ದ ಈ ವಿದ್ಯಾರ್ಥಿ ಸಹಪಾಠಿಗಳ ಜೊತೆಯಲ್ಲಿ ಇಂಟರ್ವೆಲ್ ಸಮಯದಲ್ಲಿ ತರಗತಿಯಿಂದ ಹೊರ ಹೋಗಿ, ಸಮೀಪದ ಕಲ್ಲುಕ್ವಾರಿ ಕುಂಟೆ(ಹೊಂಡ)ದಲ್ಲಿ ಕಾಲು ತೊಳೆಯಲು ಮುಂದಾಗಿದ್ದಾನೆ.
ಅಶೋಕ್ ಆಕಸ್ಮಿಕವಾಗಿ ಪಾಚಿಯ ಮೇಲೆ ಕಾಲಿರಿಸಿ ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ. ಅಶೋಕ್ ಹೊಂಡಕ್ಕೆ ಬಿದ್ದ ಸುದ್ದಿಯನ್ನು ಸಹಪಾಠಿಗಳು ತಿಳಿಸಿದ ಕೂಡಲೇ ಆಸುಪಾಸಿನವರು ಆತನನ್ನು ರಕ್ಷಿಸಲು ಮುಂದಾದರು. ಆದರೆ, ಅವರ ಯತ್ನ ಫಲಕಾರಿಯಾಗದೆ ಅಶೋಕ್ ಮೃತಪಟ್ಟನು.
ಕರ್ತವ್ಯ ನಿರ್ಲಕ್ಷ್ಯ : ಆಂಧ್ರದ ಗೂಳ್ಯಂ ನಿವಾಸಿಗಳಾಗಿದ್ದು ಕೆಲಸಕ್ಕಾಗಿ ಬಂಡಿಹಟ್ಟಿ ಸೇರಿದ್ದ ಮೃತನ ಪೋಷಕರು, ಸಂಬಂಧಿಗಳು ಮತ್ತು ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದರು. ಈ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತರಗತಿ ಶಿಕ್ಷಕರನ್ನು ಕೂಡಲೇ ಅಮಾನತು ಮಾಡಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಶಾಲೆಯಲ್ಲೇ ಶೌಚಾಲಯ ಇದ್ದರೂ ಅದಕ್ಕೆ ಆವರಣ ಇಲ್ಲ. ಶಾಲೆಯ ಸುತ್ತಲೂ ಮನೆಗಳಿವೆ. ಹಾಗಾಗಿ, ಪ್ರತಿನಿತ್ಯವೂ ವಿದ್ಯಾರ್ಥಿಗಳು ಬಹಿರ್ದೆಸೆಗೆಂದು ಹೊಂಡದ ಬಳಿ ಹೋಗಿ, ದುರಂತ ನಡೆದ ಕುಂಟೆಯಲ್ಲಿ ಕೈಕಾಲು ತೊಳೆಯುತ್ತಾರೆ. ದುರದೃಷ್ಟವಶಾತ್ ಎಂದೂ ನಡೆಯದ ಘಟನೆ ಗುರುವಾರ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಜಿಲ್ಲಾಸುದ್ದಿ]